ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಅಳಿಸಿಹಾಕುವ ಪ್ರಯತ್ನ ನಡೆಸಲಾಯಿತು. ಇದರಿಂದ ದೀರ್ಘಕಾಲದವರೆಗೆ ಅವರು ಭಾರತ ರತ್ನ ಪ್ರಶಸ್ತಿಯಿಂದ ವಂಚಿತರಾದರು ಎಂದು ಅಮಿತ್ ಶಾ ಹೇಳಿದ್ದಾರೆ.
ವಲ್ಲಭಬಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿದ್ದ ಏಕತೆಗಾಗಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಮೊದಲ ಗೃಹ ಸಚಿವರಾಗಿದ್ದ ಪಟೇಲರ ದೂರದೃಷ್ಟಿಯಿಂದ ರಾಜಪ್ರಭುತ್ವದ ರಾಜ್ಯಗಳು ಒಗ್ಗೂಡಿ ಭಾರತವೂ ಏಕೀಕರಣಗೊಂಡಿತು. ಲಕ್ಷದ್ವೀಪದ ದ್ವೀಪಗಳು, ಜುನಾಗಢ , ಹೈದರಾಬಾದ್ ಮತ್ತು ಇತರ ರಾಜಾಡಳಿತದ ರಾಜ್ಯಗಳು ಭಾರತದಲ್ಲಿ ವಿಲೀನವಾಗುವಲ್ಲಿ ಪಟೇಲ್ ಕಾರಣ ಎಂದು ಅವರು ನೆನಪು ಮಾಡಿಕೊಂಡರು.
ಆದರೆ, ಇಂತಹ ಪಟೇಲರ ಪರಂಪರೆಯನ್ನು ದುರ್ಬಲಗೊಳಿಸುವ ಮತ್ತು ಅಳಿಸುವ ಪ್ರಯತ್ನ ನಡೆಯಿತು. ಹಾಗೇ ಅವರಿಗೆ ಹಲವು ವರ್ಷಗಳಿಂದ ಭಾರತ ರತ್ನ ಪ್ರಶಸ್ತಿ ದೊರಕದಂತೆ ನೋಡಿಕೊಳ್ಳಲಾಯಿತು ಎಂದು ಅಮಿತ್ ಶಾ ಹೇಳಿದರು.
ಪಟೇಲರ ಹಿರಿಮೆ ತೋರಿಸಲು ಪ್ರತಿಮೆ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪಟೇಲರಿಗೆ ಗೌರವ ನೀಡಬೇಕು ಎಂಬ ಉದ್ದೇಶದಿಂದ ಕೆವಡಿಯಾದಲ್ಲಿ ಅತಿ ಎತ್ತರದ ಪಟೇಲ್ ಪ್ರತಿಮೆ ಸ್ಥಾಪಿಸಿದರು. ಪಟೇಲರು 1950ರಲ್ಲಿ ಸಾವನ್ನಪ್ಪಿದರು. ಇದಾದ 41 ವರ್ಷಗಳ ನಂತರ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಲಾಯಿತು.
ಇದೀಗ ದೇಶದ ಜನರು ಒಟ್ಟುಗೂಡಿದ್ದು, 2047ರ ಹೊತ್ತಿಗೆ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಪ್ರಧಾನಿ ಅವರ ಕನಸಿನೊಂದಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. 2047ರ ಹೊತ್ತಿಗೆ ಎಲ್ಲಾ ಮಾನದಂಡದಲ್ಲೂ ಭಾರತವೂ ಜಗತ್ತಿನಲ್ಲಿ ಮುಂಚೂಣಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಟೋಬರ್ 31ರಂದು ಪಟೇಲ್ ಅವರ ಜನ್ಮ ಜಯಂತಿ ಹಿನ್ನೆಲೆ ಏಕತೆಗಾಗಿ ಓಟ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಆಯೋಜಿಸಲಾಗುವುದು. ಆದರೆ ಈ ಬಾರಿ ದೀಪಾವಳಿ ಬಂದ ಹಿನ್ನೆಲೆಯಲ್ಲಿ ಎರಡು ದಿನ ಮೊದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ದನ್ತೆರೇಸ್ನ ವಿಶೇಷ ದಿನದಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೋದಿ ಸರ್ಕಾರವೂ 2014ರಿಂದ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತೆ ದಿನವಾಗಿ ಆಚರಿಸುತ್ತಿದೆ. ಈ ಮೂಲಕ ದೇಶದ ಏಕತೆ ಸಮಗ್ರತೆ ಮತ್ತು ಭದ್ರತೆಯನ್ನು ಬಲಗೊಳಿಸುವುದಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ರು ಗುಜರಾತ್ನ ನಾಡಿಯಾಡ್ನಲ್ಲಿ 1875 ಅಕ್ಟೋಬರ್ 31ರಂದು ಜನಿಸಿದರು. ಭಾರತದ ಮೊದಲ ಗೃಹ ಮಂತ್ರಿ ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದ ಅವರು ದೇಶದಲ್ಲಿ ಈ ಮೊದಲಿದ್ದ 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದೊಂದಿಗೆ ಏಕೀಕರಣ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಗಂಟೆಗೂ ಹೆಚ್ಚಿನ ಕಾಲ ಗುಂಡಿನ ಚಕಮಕಿ: ಕೊನೆಗೂ ಉಗ್ರರಿಬ್ಬರನ್ನು ಹೊಡೆದುರುಳಿಸಿದ ಭಾರತೀಯ ಸೇನೆ