ನವದೆಹಲಿ: ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಅವರ ವಿರುದ್ಧ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಹೆಚ್ಪಿಸಿಸಿ) ಅಧ್ಯಕ್ಷೆ ಹಾಗೂ ಹಾಲಿ ಸಂಸದೆ ಪ್ರತಿಭಾ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಪ್ರತಿಭಾ ಸಿಂಗ್ ಅವರ ಆಪ್ತರ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರತಿಭಾ ಸಿಂಗ್ ಅವರು ಘೋಷಿಸಿದ್ದ ಕೆಲವು ದಿನಗಳಲ್ಲಿಯೇ, ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಸೆಣೆಸಲು ಉತ್ಸುಕರಾಗಿದ್ದಾರೆ. ಅವರು ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಹೈಕಮಾಂಡ್ನೊಂದಿಗೆ ಚರ್ಚಿಸಲು ನಿರ್ಧರಿಸಿದ್ದಾರೆ ಮತ್ತು ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ತಮ್ಮ ದಿವಂಗತ ಪತಿಯ ರಾಜಕೀಯ ಪರಂಪರೆಯನ್ನು ಹೊಂದಿದ್ದಾರೆ. ಅವರು 2021ರಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದರು. ಇದಕ್ಕೂ ಮೊದಲು 2019ರಲ್ಲಿ ಬಿಜೆಪಿ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2022 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪಕ್ಷದ ನೇತೃತ್ವವನ್ನು ಪ್ರತಿಭಾ ಸಿಂಗ್ ಅವರಿಗೆ ವಹಿಸಿದ್ದರು. ಮತ್ತೊಂದೆಡೆ, ಪಕ್ಷ ನಿರ್ಧರಿಸಿದರೆ ಅವರು ಮಂಡಿ ಕ್ಷೇತ್ರಕ್ಕೆ ಪ್ರತಿಭಾ ಸಿಂಗ್ ಉತ್ತಮ ಅಭ್ಯರ್ಥಿಯಾಗುತ್ತಾರೆ. ಅವರು ರಾಜ್ಯ ಘಟಕದ ಮುಖ್ಯಸ್ಥೆ ಮತ್ತು ಹಾಲಿ ಸಂಸದೆಯಾಗಿದ್ದಾರೆ ಎಂದು ಹಿರಿಯ ಸಚಿವ ರಾಜೇಶ್ ಧರ್ಮಾನಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಮಣಿಸಿತ್ತು. ಆದರೆ ಇತ್ತೀಚೆಗೆ ಆರು ಬಂಡಾಯ ಶಾಸಕರು ಪಕ್ಷದ ರಾಜ್ಯಸಭಾ ನಾಮನಿರ್ದೇಶಿತ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಮತ ಚಲಾಯಿಸಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರಕ್ಕೆ ಶಾಕ್ ನೀಡಿದ್ದರು. ನಂತರ ಬಂಡಾಯ ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಇತ್ತೀಚೆಗೆ ಬಂಡಾಯ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಪಕ್ಷ ತೊರೆದ ಶಾಸಕರಿಗೆ ಜನರು ಪಾಠ ಕಲಿಸುತ್ತಾರೆ: ಈ ಕುರಿತು ಸಚಿವ ರಾಜೇಶ್ ಧರ್ಮಾನಿ ಪ್ರತಿಕ್ರಿಯಿಸಿ, ನಿರ್ಣಾಯಕವಗಿರುವ ರಾಜ್ಯ ಉಪಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಗೂ ಮುಂಚಿತವಾಗಿ, ಪ್ರಜಾಪ್ರಭುತ್ವ ವಿರೋಧಿ ವಿಧಾನಗಳ ಮೂಲಕ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹೇಗೆ ಪ್ರಯತ್ನಿಸಿತು ಎಂಬುದನ್ನು ಕಾಂಗ್ರೆಸ್ ಜನರಿಗೆ ತಿಳಿಸುತ್ತದೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯು ನಮ್ಮ ಶಾಸಕರ ಮೇಲೆ ಪ್ರಭಾವ ಬೀರಿ ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಆಶ್ಚರ್ಯವೆಂದರೆ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಮತ ಚಲಾಯಿಸಿದ ಮೂವರು ಸ್ವತಂತ್ರ ಶಾಸಕರು ಬಿಜೆಪಿ ಸೇರಿದ್ದಾರೆ. ಇದು ಕೊಡು - ಕೊಳ್ಳುವಿಕೆಯಿಂದ ಸಂಭವಿಸಿರಬೇಕು. ಇಲ್ಲಿನ ಮತದಾರರು ಪ್ರಬುದ್ಧರಾಗಿದ್ದು, ಬಿಜೆಪಿಯ ಈ ಆಟನ್ನು ನೋಡಬಲ್ಲರು. ಬಹುಮತ ಪಡೆಯಲು ನಮಗೆ ಇನ್ನೂ ಒಬ್ಬ ಶಾಸಕರ ಅಗತ್ಯವಿದೆ. ಆದರೆ ಎಲ್ಲಾ ಆರು ವಿಧಾನಸಭಾ ಉಪಚುನಾವಣೆಗಳನ್ನು ಗೆಲ್ಲುವ ವಿಶ್ವಾಸವಿದೆ. ನಾವು ಎಲ್ಲಾ ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಪಕ್ಷ ತೊರೆದ ಶಾಸಕರಿಗೆ ಜನರು ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.
ಆರು ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರಿಂದ ರಾಜ್ಯ ವಿಧಾನಸಭೆಯ ಸದನದ ಬಲವು 62ಕ್ಕೆ ಇಳಿದಿದೆ. ಕಾಂಗ್ರೆಸ್ 34 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 25 ಶಾಸಕರನ್ನು ಹೊಂದಿದೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ವಂಚಿತ ವರುಣ್ ಗಾಂಧಿ ಕಾಂಗ್ರೆಸ್ಗೆ ಬಂದರೆ ಸ್ವಾಗತ: ಅಧೀರ್ ರಂಜನ್ - Varun Gandhi