ಬೆಳಗಾವಿಯಲ್ಲಿ ಭಾರೀ ಮಳೆ... ಮತ್ತೆ ಪ್ರವಾಹ ಆತಂಕ
ಬೆಳಗಾವಿ: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ಬೆಳೆಗಳು ನಾಶವಾಗಿವೆ. ಚಿಕ್ಕೋಡಿ ಉಪ ವಿಭಾಗದ ವಿವಿಧೆಡೆ ಸುರಿದ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಇನ್ನು, ನಿಪ್ಪಾಣಿ ತಾಲೂಕಿನ ಗಳತಗಾ, ಬೋರಗಾಂವವಾಡಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ, ರಾತ್ರಿಯೆಲ್ಲ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿರುವ ಕೆರೆ ತುಂಬಿ ಹರಿಯುತ್ತಿದ್ದು, ಬಂದಾರ ಮೇಲೆ ಹರಿಯುತ್ತಿರುವ ನೀರಿನ ರಭಸಕ್ಕೆ ರಸ್ತೆ ಮೇಲಿನ ಡಾಂಬರ್ ಕಿತ್ತು ಹೋಗಿದೆ. ನದಿ ತೀರದ ಜನರು ಪ್ರವಾಹ ಸಂಕಷ್ಟದಿಂದ ಹೊರ ಬರುತ್ತಿದ್ದು, ಮತ್ತೆ ಸುರಿಯುತ್ತಿರುವ ಮಳೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ಅಲ್ಪಾವಧಿ ಬೆಳೆಗಳಾದ ಗೋವಿನಜೋಳ, ಶೇಂಗಾ, ಸೋಯಾಬಿನ್ ಮೇಲೆ ದುಷ್ಪರಿಣಾಮ ಬೀರುತ್ತಿದೆ.