ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ: ಶಾಸಕ ರವೀಂದ್ರನಾಥ್ ಚಾಲನೆ
ಇಂದಿನಿಂದ ಮೂರು ದಿನಗಳ ಕಾಲ ದಾವಣಗೆರೆ ನಗರದ ಗಾಜಿನ ಮನೆಯಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುತ್ತಿರುವ ಈ ಪ್ರದರ್ಶನಕ್ಕೆ ಶಾಸಕ ಎಸ್ಎ ರವೀಂದ್ರನಾಥ್ ಅಧಿಕೃತ ಚಾಲನೆ ನೀಡಿದರು. ಪ್ರತಿವರ್ಷ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ನಡೆಯುತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪುಷ್ಪ ಪ್ರದರ್ಶನ ಮಾತ್ರ ಏರ್ಪಡಿಸಲಾಗಿದೆ. ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ ಗೇಟ್ ವೇ ಆಫ್ ಇಂಡಿಯಾದ ಕಲಾಕೃತಿ ರಚಿಸಲಾಗಿದೆ. 26 ಅಡಿ ಎತ್ತರ, 17 ಅಡಿ ಅಗಲದಲ್ಲಿ 2.10 ಲಕ್ಷ ಬಿಳಿ, ಕೆಂಪು ಹಾಗೂ ಹಳದಿ ಬಣ್ಣಗಳ ಸೇವಂತಿಗೆ ಹೂವುಗಳಲ್ಲಿ ನಿರ್ಮಿಸಲಾಗಿರುವುದು ಹಾಗೂ 36 ಸಾವಿರ ಕೆಂಪು ಗುಲಾಬಿ, ಎಲೆಗಳನ್ನು ಬಳಸಿರುವುದು ವಿಶೇಷ.