ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್ - ಮಾಜಿ ಶಾಸಕ ಅನಿಲ್ ಲಾಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18274079-thumbnail-16x9-new.jpg)
ಬಳ್ಳಾರಿ: ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ತಿಳಿಸಿದ್ದಾರೆ. ಬಳ್ಳಾರಿ ಪತ್ರಕರ್ತರ ಒಕ್ಕೂಟದ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಡಿಮೆ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋತ ನನಗೆ ಟಿಕೆಟ್ ತಪ್ಪಿಸಲು ಸ್ಪಷ್ಟ ಕಾರಣ ಹೇಳಿಲ್ಲ. ಅದಕ್ಕಾಗಿ ಬೆಂಬಲಿಗರ ಆಶಯದಂತೆ ಬಂಡಾಯವಾಗಿ ಸ್ಪರ್ಧೆ ಮಾಡಲು ಬಯಸಿರುವೆ ಎಂದರು.
ನಾನು ದೆಹಲಿಗೆ ಹೋಗಿ ಕ್ಷೇತ್ರದಲ್ಲಿನ ವಾಸ್ತವಾಂಶಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ನೀಡಿದ್ದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೆ, ವಿಜಯನಗರದ ಮಾಜಿ ಶಾಸಕ ಗವಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಕಲಘಟಗಿಯಲ್ಲಿ 25 ಸಾವಿರ ಮತಗಳಿಂದ ಸೋತ ಸಂತೋಷ್ ಲಾಡ್ಗೆ ಟಿಕೆಟ್ ನೀಡಿದ್ದೀರಿ. ಇದೀಗ ಪಕ್ಷ ಬಿಡುವ ಬಿಜೆಪಿಯವರಿಗೆ ಟಿಕೆಟ್ ಕೊಡುತ್ತೀರಿ. ಇದಕ್ಕೆ ಯಾವ ಮಾನದಂಡ. ಅದೇ ರೀತಿ ಯಾವ ಮಾನದಂಡದ ಮೇಲೆ ಬಳ್ಳಾರಿ ನಗರದ ಟಿಕೆಟ್ನ್ನು ಭರತ್ ರೆಡ್ಡಿಗೆ ಕೊಟ್ಟಿದ್ದೀರಿ?. ಬಳ್ಳಾರಿಯ ಕಾರ್ಪೊರೇಷನ್ ಕಾಂಗ್ರೆಸ್ ತೆಕ್ಕೆಗೆ ಬರಲು ನಾನು ಕಾರಣ. ನಾನು ಏ. 19 ಅಥವಾ 20 ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಆಲೋಚಿಸಿರುವೆ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಇಂದಿನಿಂದ ಚುನಾವಣೆ ಮುಗಿಯುವವರೆಗೆ ಕಪ್ಪುಬಟ್ಟೆ ಧರಿಸುವೆ ಎಂದು ಅನಿಲ್ ಲಾಡ್ ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಅನಿಲ್ ಲಾಡ್