Published : Sep 24, 2023, 7:23 PM IST
|Updated : Sep 24, 2023, 7:53 PM IST
ತಮಿಳುನಾಡಿಗೆ ಕಾವೇರಿ ನೀರು: ಚಾಮರಾಜನಗರದಲ್ಲಿ ಬಾರುಕೋಲು ಚಳವಳಿ ನಡೆಸಿದ ಕನ್ನಡಪರ ಸಂಘಟನೆಗಳು
ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದ್ದು, ಇಂದು ಕನ್ನಡಪರ ಸಂಘಟನೆಗಳಿಂದ ಬಾರುಕೋಲು ಚಳವಳಿ ನಡೆಯಿತು. ಚಾಮರಾಜೇಶ್ವರ ದೇವಾಲಯದಿಂದ ಬಾರುಕೋಲು ಬೀಸುತ್ತ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ವೇಳೆ, ಸರಕು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯನ್ನು ತಡೆದು ನೀರು ಕೇಳಿದರೆ ನೀರು ಕೇಳಬೇಡಿ ಎಂದರು. ಇನ್ನು, ಇದೇ ರೀತಿ ನೀರನ್ನು ಹರಿಸುತ್ತಿದ್ದರೇ ಮುಂದಿನ ಶುಕ್ರವಾರ ಇಲ್ಲವೇ ಶನಿವಾರ ಚಾಮರಾಜನಗರ ಬಂದ್ ಮಾಡುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.
ಕನ್ನಡಪರ ಹೋರಾಟಗಾರ ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕ್ರಮವನ್ನು ಖಂಡಿಸಿ ಚಾಮರಾಜನಗರದಲ್ಲಿ ನಿರಂತರವಾಗಿ 19ನೇ ದಿನ ಹೋರಾಟವನ್ನು ಮಾಡುತ್ತಿದ್ದೇವೆ. ಇಂದು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬಾರುಕೋಲಿನಲ್ಲಿ ತಮಿಳುನಾಡು ಸರ್ಕಾರಕ್ಕೆ ಹೊಡೆಯುತ್ತೇವೆ ಎಂದು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ತಮಿಳುನಾಡು ಸರ್ಕಾರ ಕನ್ನಡ ವಿರೋಧಿಸಿ ಸರ್ಕಾರ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸುವ ಸರ್ಕಾರ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮಂಡ್ಯ: ಬೆಂಗಳೂರು ಬಂದ್ ಬೆಂಬಲಕ್ಕೆ ರೈತ ಹಿತರಕ್ಷಣಾ ಸಮಿತಿ ನಿರ್ಧಾರ