ಯಾದಗಿರಿ: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಲಬುರಗಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಾ. ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲಾ ಬರ ಪರಿಶೀಲನೆಗೆ ಆಗಮಿಸಿದ್ದ ಅವರು ಸಿಎಂ ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ರು. ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಬರುವ ದಿನಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗವಾಗಿ ಮಾತನಾಡಿದ್ರು. ಸಿಎಂ ಕುಮಾರಸ್ವಾಮಿ ಬರ ಆವರಿಸಿದ ಸಂದರ್ಭದಲ್ಲಿ ಗುರುಮಿಠಕಲ್ ಕ್ಷೇತ್ರದಲ್ಲಿ ಆಗಮಿಸಿ ಬರ ಪರಶೀಲನೆ ಮಾಡದೇ ಈಗ ನಾಮಕವಾಸ್ತೆಗೆ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಸಿಲಿದ್ದಾಗ ಜಿಲ್ಲೆಯಲ್ಲಿ ವಾಸ್ತವ್ಯ ಮಾಡದೆ ಮಳೆ ಬರುವ ಸಮಯದಲ್ಲಿ ಏನು ಬರ ಪರಿಶೀಲನೆ ಮಾಡ್ತಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ರು.
ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಯಾವುದೇ ತಂತ್ರಗಾರಿಕೆ ಮಾಡುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಸುಳ್ಳು ರಾಜಕಾರಣಿ. ಕಾಂಗ್ರೆಸ್ ನಾಯಕರನ್ನು ಖರೀದಿ ಮಾಡಿ ಬಿಜೆಪಿಯವರು ಸರ್ಕಾರ ಕೆಡುವುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾದ ಮಾಡ್ತಿದ್ದಾರೆ. ಅದು ಅವರ ಭ್ರಮೆ ಎಂದು ಸಂಸದ ಉಮೇಶ್ ಜಾಧವ್ ಟೀಕಿಸಿದರು. ನಾವು ಯಾವ ನಾಯಕರನ್ನು ಸಂಪರ್ಕಿಸಿಲ್ಲ. ಸಂಪರ್ಕ ಮಾಡುವುದೂ ಇಲ್ಲ. ನಾವು ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದ್ರೆ ಕೊಡುವುದಿಲ್ಲ. ಸ್ವಲ್ಪ ದಿನದಲ್ಲಿ ಮೈತ್ರಿ ಸರ್ಕಾರ ತನ್ನಿಂದ ತಾನೇ ಪತನವಾಗಲಿದೆ ಎಂದು ಮೈತ್ರಿ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ರು.