ವಿಜಯಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಮಸ್ಯೆಗಳು ಬಗೆಹರಿಯದ ಕಾರಣ ಹಲವಾರು ಗ್ರಾಮಗಳ ಜನರು ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಅಂತೆಯೇ ನಗರದ ಹೊರವಲಯದ ಶಿವಗಿರಿ ಬಳಿಯ ವಾರ್ಡ್ ನಂ.17ರ ಸೌಭಾಗ್ಯ ನಗರದ ನಾಗರಿಕರು ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡುವ ಪೋಸ್ಟರ್ಗಳನ್ನು ಅಂಟಿಸಿ ಮಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.

ಪೋಸ್ಟರ್ ಅಂಟಿಸಿ ಪ್ರತಿಭಟನೆ: ಮೂಲಭೂತ ಸೌಕರ್ಯಗಳಾದ 24/7 ಕುಡಿಯುವ ನೀರು, ಕಳೆದ ಐದು ವರ್ಷಗಳಿಂದ ಸುಸಜ್ಜಿತ ರಸ್ತೆ ಇಲ್ಲದಿರುವುದು, ಕುಡುಕರು, ಕಳ್ಳರ ಹಾವಳಿ, ಮಕ್ಕಳಿಗೆ ಆಟದ ಮೈದಾನ, ಹಿರಿಯರಿಗೆ ಉದ್ಯಾನ, ರಸ್ತೆ ದೀಪ, ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದಿರುವ ಕಾರಣ ರಾತ್ರಿ ಹೊರಗಡೆ ಬರಲು ಇಲ್ಲಿನ ಜನ ಭಯಪಡುವಂತಾಗಿದೆ. ಸೂಕ್ತ ಭದ್ರತೆ ಇಲ್ಲದಿರುವ ಕುರಿತು ಸಾಕಷ್ಟು ಬಾರಿ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿ ಚುನಾವಣಾ ಬಹಿಷ್ಕಾರದ ಪೋಸ್ಟರ್ ಅಂಟಿಸಿ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.
ಇನ್ನು ಕಿಡಿಗೇಡಿಗಳು ಈ ಪೋಸ್ಟರ್ಗಳನ್ನು ಕಿತ್ತುಕೊಂಡು ಹೋಗಿದ್ದರ ಬಗ್ಗೆ ಬಡಾವಣೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟರ್ಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಶೀಘ್ರವೇ ಎಲ್ಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.
ಇದೇ ವೇಳೆ ಬಡಾವಣೆಯ ನಾಗರಿಕರು ತಮ್ಮ ಅಳಲನ್ನು ತೊಡಿಕೊಂಡರು. ‘ಬಡಾವಣೆಯಲ್ಲಿ 40-50 ಮನೆಗಳಿದ್ದು, ನೂರಾರು ಜನ ಇಲ್ಲಿ ವಾಸಿಸುತ್ತಿದ್ದಾರೆ. ಸರಿಯಾದ ರಸ್ತೆಯಿಲ್ಲ ಎಂದು ಶಾಲೆಯ ವಾಹನಗಳು ಬಡಾವಣೆಗೆ ಬರುತ್ತಿಲ್ಲ. ಇದರ ಜತೆ ಮಧ್ಯಾಹ್ನವೇ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ಆಯುಕ್ತರು ಸದ್ಯ ಭರವಸೆ ನೀಡಿದ್ದು, ಇನ್ನೂ ಚುನಾವಣೆಗೆ ಸಮಯವಿರುವ ಕಾರಣ ಕಾಯುತ್ತೇವೆ. ಒಂದು ವೇಳೆ ಮೂಲಸೌಲಭ್ಯ ಒದಗಿಸದಿದ್ದರೆ ಚುನಾವಣೆ ಬಹಿಷ್ಕಾರ ಇಲ್ಲವೇ ಮುಂದೆ ಏನು ಮಾಡಬೇಕು ಎನ್ನುವದನ್ನು ಬಡಾವಣೆಯ ಹಿರಿಯರು ಸೇರಿ ಚರ್ಚೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದಲ್ಲಿಯೂ ಬಹಿಷ್ಕಾರದ ಬಿಸಿ: ಇದೇ ವೇಳೆ ಆಲಮೇಲ ತಾಲೂಕಿನ ಕೆಲ ಗ್ರಾಮಗಳನ್ನು ವಾಪಸ್ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ನಾಲ್ಕು ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಲಮೇಲ ತಾಲೂಕಿನ ಗುತ್ತರಗಿ, ಭಂಟನೂರ, ಕೆರೂರ ಹಾಗೂ ಹಂಚಿನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬರುವ ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಚುನಾವಣಾಧಿಕಾರಿಗಳಾಗಲಿ, ರಾಜಕೀಯ ಮುಖಂಡರು ತಮ್ಮ ಗ್ರಾಮಕ್ಕೆ ಬರಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ.

ಹೊಸ ತಾಲೂಕುಗಳ ರಚನೆ ನಂತರ ಆಲಮೇಲ ತಾಲೂಕು ಆಗಿ ಪರಿವರ್ತನೆಯಾಗಿದೆ. ಸದ್ಯ ನಮ್ಮ ಗ್ರಾಮಗಳು ಸಿಂದಗಿ ಪಟ್ಟಣಕ್ಕೆ ಕೇವಲ 15 ಕಿ.ಮೀ ದೂರವಿದ್ದರೆ, ಆಲಮೇಲ ಪಟ್ಟಣ 38 ಕಿ.ಮೀ ದೂರವಿದೆ. ಇದರಿಂದಾಗಿ ನಮಗೆ ವ್ಯವಹಾರಿಕ ಸಂಬಂಧಗಳಿಗೆ ತೊಂದರೆಯಾಗುತ್ತಿದೆ. ರೈತಾಪಿ ವರ್ಗಗಳೇ ಹೆಚ್ಚಿರುವ ಈ ಗ್ರಾಮಗಳಿಂದ ಗೊಬ್ಬರ ಸೇರಿದಂತೆ ಹಲವು ವ್ಯವಹಾರಗಳು ಮಾಡಲು ತೊಂದರೆ ಯಾಗುತ್ತಿದೆ. ನಾವು ಬೆಳೆದ ಬೆಳೆ ಮಾರಾಟ ಮಾಡಲು ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಿರುವಾಗ ನಾವು ಮತದಾನ ಮಾಡುವದರಿಂದ ನಮ್ಮ ಗ್ರಾಮಗಳಿಗೆ ಏನು ಪ್ರಯೋಜನೆ ಇಲ್ಲವಾಗಿದೆ. ಹೀಗಾಗಿ ಚುನಾವಣೆ ಬಹಿಷ್ಕಾರ ಹಾಕಲಾಗಿದೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ಚುನಾವಣೆಯಿಂದ ದೂರವಿರುವುದಾಗಿ ತಿಳಿಸಿದ್ದಾರೆ.
ಚುನಾವಣೆ ಸಂಬಂಧ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ. ಚುನಾವಣಾಧಿಕಾರಿಗಳು, ರಾಜಕೀಯ ಮುಖಂಡರು ತಮ್ಮ ಗ್ರಾಮಗಳಿಗೆ ಕಾಲಿಡಬೇಡಿ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಗೆಹರಿಯದ ಮೂಲಭೂತ ಸಮಸ್ಯೆ: ಶಿರಸಿ ಲಿಡ್ಕರ್ ಕಾಲೊನಿಯಲ್ಲಿ ಮತದಾನ ಬಹಿಷ್ಕಾರ