ವಿಜಯಪುರ: ಕಳೆದ 14 ಗಂಟೆಗಳಲ್ಲಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಒಟ್ಟು 30.58 ಮಿಲಿ ಮೀಟರ್ ಮಳೆಯಾಗಿದೆ. ತಾಳಿಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 56.85 ಮಿ.ಮೀಟರ್ ಮಳೆಯಾಗಿದೆ. ಚಡಚಣ ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 12.0 ಮಿ.ಮೀಟರ್ ಮಳೆಯಾಗಿದೆ.
ಸಿಂದಗಿ ತಾಲೂಕಿನ ಕುಳೆಕುಮಟಗಿ ಗ್ರಾಮದಲ್ಲಿ ಗಂಗಾಧರ ಸಮಗಾರ ಎಂಬುವರಿಗೆ ಸೇರಿದ ಎತ್ತು ಕೊಟ್ಟೆಗೆಯಲ್ಲಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದೆ. ತಾಳಿಕೋಟೆ ತಾಲೂಕಿನ ಡೋಣಿ ನದಿಯ ಸೇತುವೆ ಮುಳಗಡೆಯಾಗಿದೆ. ಮುದ್ದೇಬಿಹಾಳದಲ್ಲಿ ಹಲವು ಮನೆಗಳು ಕುಸಿತಗೊಂಡಿವೆ. ಮಳೆ ನೀರಿನಿಂದ ಬೆಳೆ ಸಹ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಬಸವನಬಾಗೇವಾಡಿ, ಸಿಂದಗಿ, ಆಲಮೇಲದಲ್ಲಿ ಮಳೆಯಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಜನ ಸಂಚಾರ ಸಹ ವಿರಳವಾಗಿದೆ. ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಪಟ್ಟಣದಿಂದ ಮುಳಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆ ಸಂಪೂರ್ಣ ಜಲಾವೃತವಾಗಿದೆ.
![heavy rain vijayapura](https://etvbharatimages.akamaized.net/etvbharat/prod-images/kn-vjp-02-heavy-rain-av-7202140_26092020131610_2609f_1601106370_941.jpg)
ಅಕ್ಕಪಕ್ಕದ ಹೊಲ ಗದ್ದೆಗಳಿಗೆ ಹೋಗಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತೋಟದ ಮನೆಯಲ್ಲಿ ವಾಸವಿರುವ ಜನರು ಗ್ರಾಮಗಳಿಗೆ ಬರಲು ಆಗದೆ ತೊಂದರೆ ಅನುಭವಿಸುವಂತಾಗಿದೆ. ಇಂಡಿ ತಾಲೂಕು ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದಿಂದ ಮತ್ತೆ ಹೆಚ್ಚುವರಿ ನೀರು ಹರಿದು ಬಂದರೆ ಭೀಮಾ ನದಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿವೆ.
![heavy rain vijayapura](https://etvbharatimages.akamaized.net/etvbharat/prod-images/kn-vjp-02-heavy-rain-av-7202140_26092020131610_2609f_1601106370_580.jpg)
ಮಳೆ ಪ್ರಮಾಣ: ವಿಜಯಪುರ ನಗರ 53.4, ಭೂತನಾಳ 28.8, ನಾಗಠಾಣ 6.3, ಹಿಟ್ನಳ್ಳಿ 60.6 ಸೇರಿ 37.27 ಮಿ.ಮೀಟರ್, ಬಬಲೇಶ್ವರ 27.8, ತಿಕೋಟಾ 16.75, ಬಾಗೇವಾಡಿ 54.66, ನಿಡಗುಂದಿ 31.6, ಕೊಲ್ಹಾರ 13.1, ಮುದ್ದೇಬಿಹಾಳ 50.7, ತಾಳಿಕೋಟೆ 50.85, ಇಂಡಿ 19.26, ಚಡಚಣ 12.0, ಸಿಂದಗಿ 41.62 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 53.4 ಮಿಲಿ ಮೀಟರ್ ಮಳೆಯಾಗಿದೆ.