ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ನಾನು ಹೊರಗಡೆ ಓಡಾಡುತ್ತಿದ್ದೇನೆ, ಅದರ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಗೋವಿಂದ ಕಾರಜೋಳ ಪ್ರತಿಕ್ರಿಯೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾಗೂ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾನು ನಾಡಿದ್ದು ಬೆಂಗಳೂರಿಗೆ ಹೋದ ಮೇಲೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಆಗ ಯಾವೆಲ್ಲಾ ಬೆಳವಣಿಗೆ ಆಗುತ್ತದೆ ಎನ್ನುವುದು ಗೊತ್ತಾಗಲಿದೆ ಎಂದರು.
ಕೆಲವರ ಸ್ಥಾನಮಾನ ತ್ಯಾಗ ವಿಚಾರವಾಗಿ ಮಾತನಾಡಿದ ಕಾರಜೋಳ, ಡಿಸಿಎಂ ಸ್ಥಾನ, ಸಚಿವ ಸ್ಥಾನಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದ್ರೆ, ಇವತ್ತೇ ಅದಕ್ಕೆ ಸಿದ್ಧ. ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ನಾನು ಅದಕ್ಕೆ ಬದ್ಧವಾಗಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹೇಗೆ ಹೇಳ್ತಾರೋ ಹಾಗೆ ನಾನು ಚಾಚು ತಪ್ಪದೆ ಮಾಡುತ್ತೇನೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ. ಪಕ್ಷ ಸೂಚಿಸಿದ್ರೆ ನಾನು ಖಂಡಿತವಾಗಿ ಸ್ಥಾನ ತ್ಯಾಗ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು, ಸೋತವರಿಗೆ ಸ್ಥಾನಮಾನ ನೀಡುವ ವಿಚಾರವಾಗಿ ಮಾತನಾಡಿದ ಡಿಸಿಎಂ ಕಾರಜೋಳ, ಅದರ ಬಗ್ಗೆ ಯತ್ನಾಳ್ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ, ಗೊತ್ತಿಲ್ಲದೇ ಏನೂ ಹೇಳುವುದು ಸರಿಯಲ್ಲ. ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ನನ್ನ ಆಸೆ ಕೂಡ ಹೌದು ಎಂದರು.