ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾರಜೋಳ ಹಾಗೂ ತಿಕೋಟಾಗಳಲ್ಲಿ ಮೊದಲ ಹಂತದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ ಶಾಸಕರು, ಪ್ರಥಮ ಹಂತದಲ್ಲಿ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಾಗೂ ತಿಕೋಟಾ ಪಟ್ಟಣದ ಬಿ.ಸಿ.ಎಂ ವಸತಿ ನಿಲಯ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ಹಾಸ್ಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ತಾಲೂಕು ಆಡಳಿತದಿಂದ ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ಕಾರಜೋಳದಲ್ಲಿ 90 ಹಾಸಿಗೆಗಳ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಅಗತ್ಯವಿದ್ದರೆ ಬೇರೆ ಸ್ಥಳಗಳಲ್ಲಿಯೂ ವಿಸ್ತರಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
![Corona Center start in rural area, Corona Center start in rural area says MLA MB patil, MLA MB patil, MLA MB patil news, ಗ್ರಾಮೀಣ ಭಾಗದಲ್ಲಿ ಕೊರೊನಾ ಸೆಂಟರ್ ಆರಂಭ, ಗ್ರಾಮೀಣ ಭಾಗದಲ್ಲಿ ಕೊರೊನಾ ಸೆಂಟರ್ ಆರಂಭ ಎಂದ ಶಾಸಕ ಎಂಬಿ ಪಾಟೀಲ, ಶಾಸಕ ಎಂಬಿ ಪಾಟೀಲ, ಶಾಸಕ ಎಂಬಿ ಪಾಟೀಲ ಸುದ್ದಿ,](https://etvbharatimages.akamaized.net/etvbharat/prod-images/kn-vjp-05-village-center-corona-care-av-7202140_17052021180347_1705f_1621254827_707.jpg)
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹಬ್ಬಿದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಎಲ್ಲ ಕಡೆ ಮನೆ ಮನೆ ಸರ್ವೇ ಮಾಡಿ ರೋಗ ಲಕ್ಷಣಗಳನ್ನು ಗುರುತಿಸುವ ಕಾರ್ಯ ಆರಂಭ ಮಾಡಿರುವುದು ಸ್ವಾಗತಾರ್ಹ. ಅಂತವರಿಗೆ ಪ್ರಾಥಮಿಕ ಚಿಕಿತ್ಸೆಗೆ ಈ ಕೋವಿಡ್ ಕೇರ್ ಸೆಂಟರ್ಗಳನ್ನು ಬಳಸಬಹುದು. ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯ ಮೂಲಭೂತ ಸೌಕರ್ಯಗಳಾದ ಸ್ಥಳ, ಸಮುದಾಯ ಭವನಗಳು, ಶಾಲೆಗಳು, ಗೋಡಾವನಗಳು, ವಿಶಾಲ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ನೀಡಲು ಮುಂದೆ ಬರಬೇಕು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಾದವರಿಗೆ ಎಲ್ಲ ರೀತಿಯ ನೆರವು ನೀಡಲು ದಾನಿಗಳು ಮುಂದಾಗಬೇಕು ಎಂದು ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.