ವಿಜಯಪುರ: ಮನೆಯ ಮುಂದಿನ ಚರಂಡಿ ನಿರ್ಮಾಣ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಟುಂಬವೊಂದರ ಮೇಲೆ ಪುರಸಭೆ ಸದಸ್ಯ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜಾಲಹಳ್ಳಿ ತಾಂಡಾದಲ್ಲಿ ಗಲಾಟೆ ನಡೆದಿದ್ದು, ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಸವನಬಾಗೇವಾಡಿ ಪುರಸಭೆ ಸದಸ್ಯ ನೀಲಪ್ಪ ನಾಯಕ ಎಂಬವರು ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಮುಂದಾಗಿದ್ದರು. ಈ ವೇಳೆ, ತಮ್ಮ ನಿವೇಶನ ಜಾಗದಲ್ಲಿ ಚರಂಡಿ ನಿರ್ಮಿಸಬೇಡಿ ಎಂದು ಮಂಜುನಾಥ ಲಮಾಣಿ ಹಾಗೂ ಅವರ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಪುರಸಭೆ ಸದಸ್ಯ ನೀಲಪ್ಪ ನಾಯಕ ಹಾಗೂ ಆತನ ಬೆಂಬಲಿಗರು ಮಂಜುನಾಥ ಲಮಾಣಿ ಹಾಗೂ ಅವರ ಕುಟುಂಬ ವರ್ಗ ಪರಸ್ಪರ ಕೈ ಕೈ ಮಿಲಾಯಿಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಮೊಬೈಲ್ ದೃಶ್ಯದ ಆಧಾರದ ಮೇಲೆ ಪುರಸಭೆ ಸದಸ್ಯ ನೀಲಪ್ಪ ನಾಯಕ, ಜಯಸಿಂಗ ನಾಯಕ, ಕಾಶಿನಾಥ ರಾಠೋಡ್ ಹಾಗೂ ನಾಮದೇವ ರಾಠೋಡ್ ಅವರ ವಿರುದ್ಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.