ಕಾರವಾರ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಐತಿಹಾಸಿಕ ಗೆಲುವಿನೊಂದಿಗೆ ಅನಂತಕುಮಾರ್ ಆರನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ.
ಎದುರಾಳಿ ಶಿಷ್ಯನ ವಿರುದ್ಧವೇ ಗುರುವಿಗೆ ಐತಿಹಾಸಿಕ ಗೆಲುವು!
ಹೌದು ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಗುರು ಶಿಷ್ಯರಾಗಿದ್ದ ಅನಂತಕುಮಾರ್ ಹೆಗಡೆ ಹಾಗೂ ಆನಂದ್ ಅಸ್ನೋಟಿಕರ್ ಲೋಕಸಭಾ ಚುನಾವಣೆಯಲ್ಲಿ ಎದುರು ಬದುರಾಗಿ ಸ್ಪರ್ಧಿಸಿ ಬಿಗ್ ಪೈಟ್ ನಡೆಸಿದ್ದರು. ಗುರುವಿನ ವಿರುದ್ಧವೇ ತೊಡೆ ತಟ್ಟಿದ್ದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಭರ್ಜರಿ ಪ್ರಚಾರ ನಡೆಸಿದ್ದರು.
ಕೊನೆ ಹಂತದಲ್ಲಿ ಆನಂದ್ ಅಸ್ನೋಟಿಕರ್ ಗೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಬೆಂಬಲ ಸಿಕ್ಕಿತ್ತಾದರೂ ಏಕಾಂಗಿಯಾಗಿ ಕ್ಷೇತ್ರವನ್ನು ಸುತ್ತುತ್ತಾ ಅನಂತಕುಮಾರ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದರು. ಆದರೂ ಮತದಾರ ಪ್ರಭುಗಳು ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆಯನ್ನು ಬೆಂಬಲಿಸಿದ್ದು, ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಇನ್ನು ಅನಂತಕುಮಾರ್ ಹೆಗಡೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದಾರೆ. ಈ ಹಿಂದೆ ಕಾಂಗ್ರೆಸ್ ನ ದೇವರಾಯ ಜಿ ನಾಯ್ಕ ಮಾತ್ರ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದರು. ಇದೀಗ ಈ ದಾಖಲೆ ಸರಿಗಟ್ಟುವ ಜೊತೆಗೆ ಅತಿ ಹೆಚ್ಚು ಗೆಲುವ ದಾಖಲಿಸಿದವರ ಪೈಕಿ ಅನಂತಕುಮಾರ್ ಮೊದಲಿಗರಾಗಿದ್ದಾರೆ.
ಪ್ರಭಾವ ಬೀರಿದ ಮೋದಿ ಅಲೆ!
ಇನ್ನು ಈ ಬಾರಿ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ 23 ವರ್ಷ ಸಂಸದರಾದರು ಅಭಿವೃದ್ಧಿ ಕಾರ್ಯ ಮಾಡದ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷದವರು ಇದನ್ನೆ ಚುನಾವಣೆ ಅಸ್ತ್ರವನ್ನಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಆದರೆ ಇಂತಹ ಆರೋಪಕ್ಕೆ ಕಿವಿಗೊಡದ ಮತದಾರ ಮತ್ತೊಮ್ಮೆ ಅನಂತಕುಮಾರ್ ಹೆಗಡೆಯನ್ನು ಆಯ್ಕೆ ಮಾಡಿದ್ದಾರೆ.
ಮೋದಿ ಅಲೆಯೇ ಗೆಲುವಿಗೆ ಶ್ರೀರಕ್ಷೆ
ಗೆಲುವಿನ ಹಿಂದೆ ಮೋದಿ ಅಲೆ, ಅನಂತಕುಮಾರ್ ಹೆಗಡೆ ರಾಜಕೀಯ ತಂತ್ರ, ಹಾಗೂ ವಿರೋಧಿ ಅಭ್ಯರ್ಥಿಯ ರಾಜಕೀಯ ವೀಕ್ ನೆಸ್ ಕೂಡ ಅನಂತಕುಮಾರ್ ಗೆಲುವಿಗೆ ಪ್ರಮುಖ ಕಾರಣವಾಗಿರುವುದು ರಾಜಕೀಯವಲಯದಲ್ಲಿ ಚರ್ಚೆ ಶುರುವಾಗಿದೆ.
ಈಗಲಾದರೂ ಮಾಡ್ತಾರಾ ಅಭಿವೃದ್ಧಿ ಕೆಲಸ
ಒಟ್ಟಿನಲ್ಲಿ ಸೋಲಿಲ್ಲದ ಸರದಾರನಾಗಿ ಉತ್ತರಕನ್ನಡ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಸಂಸತ್ ಪ್ರವೇಶಿಸಿದ್ದಾರೆ. ಈ ಬಾರಿಯೂ ಅನಂತಕುಮಾರ್ ಹೆಗಡೆ ಮೇಲೆ ಕ್ಷೇತ್ರದ ಮತದಾರರು ಅಪಾರ ನೀರೀಕ್ಷೆಗಳನ್ನಿಟ್ಟಿದ್ದು, ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವುದರ ಜತೆಗೆ ಹೊಸ ಯೋಜನೆಗಳೊಂದಿಗೆ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡಲಿ ಎಂಬುದು ಕ್ಷೇತ್ರದ ಜನರ ಆಶಯ