ಚಿಕ್ಕಬಳ್ಳಾಪುರ/ಕಾರವಾರ: ಕಾರವಾರಕ್ಕೆ ಶೈಕ್ಷಣಿಕ ಪ್ರವಾಸ ಬಂದಿದ್ದ ಬಸ್ವೊಂದು ಉರುಳಿಬಿದ್ದು 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 50 ವಿದ್ಯಾರ್ಥಿಗಳು, 8 ಉಪನ್ಯಾಸಕರು ಹಾಗೂ ಇಬ್ಬರು ಆಡಳಿತ ಮಂಡಳಿಯ ಸದಸ್ಯರು ಸೇರಿ ಒಟ್ಟು 60 ಮಂದಿ ಈ ಬಸ್ನಲ್ಲಿದ್ದರು.
ವಿವರ: ಬುಧವಾರ ಜೋಗದಿಂದ ಹೊರಟು ರಾತ್ರಿ ಮುರ್ಡೇಶ್ವರಕ್ಕೆ ಬರುವಾಗ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ತಗ್ಗಿಗೆ ಬಿದ್ದಿದೆ. ಐವರು ವಿದ್ಯಾರ್ಥಿಗಳು, 11 ವಿದ್ಯಾರ್ಥಿನಿಯರು, ಇಬ್ಬರು ಉಪನ್ಯಾಸಕರು ಸೇರಿ 18 ಮಂದಿ ಗಾಯಗೊಂಡರು. ತಕ್ಷಣ ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.
![Separate accident in Karnataka passenger injured over bus overturns Accident in Karwar Accident in Chikkaballapur ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಚಿಕ್ಕಬಳ್ಳಾಪುರ ಮತ್ತು ಕಾರವಾರದಲ್ಲಿ ಬಸ್ ಪಲ್ಟಿ ಎರಡು ಜಿಲ್ಲೆಗಳಲ್ಲಿ ಬಸ್ಗಳು ಪಲ್ಟಿ ಕಾರವಾರಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ ಬಸ್ ನಿಯಂತ್ರಣ ತಪ್ಪಿ ಪಲ್ಟಿ ಚಿಕ್ಕಬಳ್ಳಾಪುರದಲ್ಲಿ ಬಸ್ ಪಲ್ಟಿ](https://etvbharatimages.akamaized.net/etvbharat/prod-images/kn-kwr-01-bus-palti-ka10044_08092022090856_0809f_1662608336_1069.jpg)
ಬಸ್ನಲ್ಲಿದ್ದ ಇನ್ನುಳಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಪ್ರತ್ಯೇಕ ವಾಹನದಲ್ಲಿ ಹೊನ್ನಾವರಕ್ಕೆ ಕರೆತಂದು ಬಿಸಿಎಂ ಹಾಸ್ಟೆಲ್ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪಾಲಕರು ಆತಂಕಕ್ಕೆ ಒಳಗಾಗದಂತೆ ಕಾರವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹಾಪುರ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ -2: ಚಿಕ್ಕಬಳ್ಳಾಪುರದಲ್ಲಿ ಬಸ್ ಪಲ್ಟಿ: ವೆಳಪಿ ಗ್ರಾಮದಿಂದ ದೊಡ್ಡಬಳ್ಳಾಪುರದ ಲಗುನ ಗಾರ್ಮೆಂಟ್ಸ್ಗೆ ಸಿಬ್ಬಂದಿಯನ್ನು ಕರೆದೊಯ್ಯುತ್ತಿರುವಾಗ ಮೇಳ್ಯಾ ಗ್ರಾಮದಲ್ಲಿ ಬಸ್ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ, 18 ಜನರಿಗೆ ಗಾಯವಾಗಿದೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ಮಹಿಳೆಯನ್ನು ಆಂಧ್ರದ ವೆಳಿಪಿ ಗ್ರಾಮದ ಅಲುವೇಲಮ್ಮ(35) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾಗಿ ಒಂದು ಗಂಟೆಯಾದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಾಗೂ ತಿರುವಿನಿಂದ ಅಪಘಾತ ಸಂಭವಿಸಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡಬಲ್ ಡೆಕ್ಕರ್ ಬಸ್ ಪಲ್ಟಿ ಐವರು ಸಾವು, 50 ಜನರಿಗೆ ಗಾಯ