ಕಾರವಾರ: ಪತ್ನಿಯ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ಕಥೆ ಕಟ್ಟಿದ್ದ ಪತಿಯಿಂದಲೇ ಪೊಲೀಸರು ಸತ್ಯ ಬಾಯ್ಬಿಡಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ತಾಲೂಕಿನ ಕತಗಾಲದ ಉಪ್ಪಿನಪಟ್ಟಣದಲ್ಲಿ ಮಂಜುನಾಥ ಶಾನಭಾಗ ತನ್ನ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದ. ಆತನ ಮಗಳು ಅನಾರೋಗ್ಯಕ್ಕೆ ಒಳಗಾಗಿದ್ದಳು. ಆಪರೇಶನ್ ಸಂಬಂಧ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗ್ತಿದೆ. ಇದೇ ರೀತಿ ಮಂಗಳವಾರ(20)ದ ರಾತ್ರಿಯೂ ಜಗಳವಾಗಿ ಸಿಟ್ಟಿಗೆದ್ದ ಪತಿ ಮಂಜುನಾಥ ತನ್ನ ಪತ್ನಿ ಮಮತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ವಿಷಯ ಬೆಳಕಿಗೆ ಬರದಂತೆ ಮಾಡಲು ಕುತ್ತಿಗೆಗೆ ಟವೆಲ್ ಕಟ್ಟಿ, ನೇಣು ಹಾಕಿಕೊಂಡಿದ್ದಾಳೆ ಎಂದು ಸುದ್ದಿ ಹರಡಿದ್ದಾನೆ. ಅಲ್ಲದೆ ಈ ಬಗ್ಗೆ ಪೊಲೀಸ್ ಠಾಣೆಗೂ ತೆರಳಿ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.