ಕಾರವಾರ : ಜಿಲ್ಲೆಯಲ್ಲಿ ನಡೆಯಲಿರುವ ಕೂರ್ಮಗಡ ದ್ವೀಪ ಜಾತ್ರೆಗೆ ಭಕ್ತರು ಲೈಫ್ ಜಾಕೆಟ್ ಇಲ್ಲದೆ ತೆರಳದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜು ಎಚ್ಚರಿಸಿದ್ದಾರೆ.
ಕಳೆದ ವರ್ಷ ಜಾತ್ರೆ ವೇಳೆ ಲೈಫ್ ಜಾಕೆಟ್ ಧರಿಸದ ಕಾರಣ ದೋಣಿ ದುರಂತಕ್ಕಿಡಾಗಿ 16 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಜಾತ್ರೆಗೆ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಇಲಾಖೆ ದೋಣಿಯಲ್ಲಿ ಪ್ರಯಾಣಿಸಲು ಭಕ್ತರು ಲೈಫ್ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೇ ಕೇವಲ ಮೂರು ಸ್ಥಳಗಳಿಂದ ಜಾತ್ರೆಗೆ ತೆರಳಲು ಅನುಮತಿ ನೀಡಲಾಗಿದ್ದು, ಪರವಾನಗೆ ಹೊಂದಿದ ದೋಣಿಗಳಿಗೆ ಮಾತ್ರ ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಅವಕಾಶ ಒದಗಿಸಲಾಗಿದೆ.
ಈಗಾಗಲೇ ಜಾತ್ರೆ ಆಯೋಜಕರು, ಮೀನುಗಾರಿಕಾ ಇಲಾಖೆ ಹಾಗೂ ದೋಣಿ ಮಾಲೀಕರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುಮಾರು 1,500 ರಷ್ಟು ಲೈಫ್ಜಾಕೆಟ್ಗಳನ್ನು ಸಿದ್ದಪಡಿಸಲಾಗಿದೆ. ಜಾತ್ರೆಗೆ ತೆರಳುವವರಿಗೆ ಯಾವುದೇ ಅನಾನುಕೂಲತೆ ಉಂಟಾಗದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.