ಕಾರವಾರ: ಮಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ಜವಬ್ದಾರಿಯಿಂದ ವರ್ತನೆ ಮಾಡಿದ್ದು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿ, ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಕೆಲವರು ರಸ್ತೆಗಳನ್ನು ಬಂದ್ ಮಾಡಿ ಬಂದರು ಠಾಣೆ ಮೇಲೆ ದಾಳಿ ಮಾಡಿದ್ದರು. ಸರ್ಕಾರ ಘಟನೆಯಲ್ಲಿ ತಾಳ್ಮೆಯಿಂದ ಕೆಲಸ ಮಾಡಿದೆ. ಆದರೆ ಕಾನೂನು ಕೈಗೆತ್ತಿಕೊಂಡವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಅಮಾಯಕರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಂಗಳೂರಿಗೆ ಭೇಟಿ ನೀಡಿದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಸರ್ಕಾರದ ಬಗ್ಗೆ ಪ್ರಶಂಸೆಯ ಮಾತುಗಳ್ಳನ್ನಾಡುತ್ತಾರೆ ಎಂಬ ಭಾವನೆ ಇಲ್ಲ. ಗೋಲಿಬಾರ್ನಲ್ಲಿ ಮೃತ ಪಟ್ಟಿವರಿಗೆ ಸರ್ಕಾರ 10 ಲಕ್ಷ ನೀಡುತ್ತಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಡೆದ ಘಟನೆಗಳಲ್ಲಿ ಮೃತರಾದವರಿಗೆ ಪರಿಹಾರ ನೀಡದೆ ಇರುವುದು ವಿರೋಧ ವ್ಯಕ್ತವಾಗಲು ಕಾರಣ. ಈ ಪರಿಹಾರವನ್ನು ಮೃತರ ಕುಟುಂಬದವರಿಗೆ ಮಾನವೀಯ ನೆಲೆಯಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.