ಭಟ್ಕಳ: ಜಾಲಿ ಪಟ್ಟಣ ಪಂಚಯತ್ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಕುರಿತಂತೆ ಕೂಡಲೇ ಮಧ್ಯಪ್ರವೇಶಿಸಿ ಕಾಮಾಗಾರಿ ತಡೆಯುವಂತೆ ಆಗ್ರಹಿಸಿ ಪಪಂ ಸದಸ್ಯರು ಭಟ್ಕಳ ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
2018, ನ. 15ರಂದು ನಡೆದ ಜಾಲಿ ಪಪಂ ಸಭೆಯಲ್ಲಿ ಸದಸ್ಯರು, ಸ.ನಂ.242 ಸದರಿ ಕಾಮಗಾರಿ ಆರಂಭಗೊಂಡಿರುವ ಜಮೀನಿನಲ್ಲಿ ಕಟ್ಟಡ ನಿರ್ಮಾಣ ವಿರೋಧಿಸಿ ಠಾರಾವು ಮಾಡಿದ್ದರು. ಆದರೆ ಪಂಚಾಯತ್ ಅಧ್ಯಕ್ಷರ ಅವಧಿ ಬದಲಾವಣೆಯ ಸಂದರ್ಭದಲ್ಲಿ ಆಡಳಿತಾಧಿಕಾರಿಯಾಗಿದ್ದ ತಹಶೀಲ್ದಾರರು ಸದಸ್ಯರ ಗಮನಕ್ಕೆ ತಾರದೆ ವಿರೋಧ ವ್ಯಕ್ತಪಡಿಸಿದ್ದ ಜಮೀನಿನಲ್ಲೇ ಕಟ್ಟಡ ನಿರ್ಮಾಣ ಪ್ರಕಿಯೆಗೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ಸ್ಥಳೀಯ ಆಡಳಿತದ ಅಧಿಕಾರವನ್ನು ಕಿತ್ತುಕೊಂಡಾಂತಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಸದಸ್ಯರು, ಕೂಡಲೇ ಸಹಾಯಕ ಆಯುಕ್ತರು ಮಧ್ಯಪ್ರವೇಶಿಸಿ ಕಾಮಗಾರಿಯನ್ನು ತಡೆಯುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಆದಂ ಪಣಂಬೂರು, ಪಂಚಾಯತ್ ಸದಸ್ಯರನ್ನು ಕಡೆಗಣಿಸಿದ ಆಡಳಿತಾಧಿಕಾರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಆರೋಪಿದ್ದಾರೆ.