ಶಿರಸಿ : ಕಸ ಅಂದ್ರೆ ಎಲ್ಲರಿಗೂ ಅಲರ್ಜಿ. ಜನ ಹೋದಲ್ಲೆಲ್ಲಾ ಕಸವನ್ನು ಬಿಸಾಡೋದು ಕಾಮನ್. ನಗರಪ್ರದೇಶಗಳಲ್ಲಿ ಆ ಕಸವನ್ನು ಅಲ್ಲಿನ ಸ್ಥಳೀಯ ಸಂಸ್ಥೆಗಳು ಪೌರಕರ್ಮಿಕರ ಮೂಲಕ ಸ್ವಚ್ಛಗೊಳಿಸುತ್ತವೆ. ಆದ್ರೆ, ವೇಸ್ಟ್ ಆಗೋ ಟೆಟ್ರಾ ಪ್ಯಾಕ್ಗಳು ಹಾಗೂ ಪ್ಲಾಸ್ಟಿಕ್ಗಳನ್ನು ಕೂಡ ಬಳಸಿ ಅದರಿಂದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನಾ ಶಿರಸಿಯಲ್ಲೊಬ್ಬರು ತೋರಿಸಿಕೊಟ್ಟಿದ್ದಾರೆ. ಅದನ್ನೇ ಶಿರಸಿ ನಗರಸಭೆ ಅನುಷ್ಠಾನ ಮಾಡಿ ಎಲ್ಲಾ ಕಡೆ ಮಾದರಿಯಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂತದ್ದೊಂದು ಪ್ರಯೋಗ ನಡೆದು ಅದು ಯಶಸ್ವಿ ಕೂಡ ಆಗಿದೆ. ಈಗ ಶಿರಸಿ ನಗರಸಭೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳೋಕೆ ಮುಂದಾಗ್ತಿದೆ. ಈ ಹಿಂದೆ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಸ್ವಚ್ಛತೆಗೆ ಕೈಜೋಡಿಸಲು ನಗರಸಭೆಯೊಂದಿಗೆ ನಗರದ ಮಲ್ನಾಡ್ ಎಂಟರ್ಪ್ರೈಸಸ್ ಸಹಕಾರ ನೀಡಿತ್ತು.
ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆಯನ್ನು ಮಾಡಿ ಕಸದ ತೊಟ್ಟಿ, ಶೌಚಾಲಯಗಳನ್ನು ಬಳಸುವ ಮೂಲಕ ಪರಿಸರ ಪೂರಕ ಯೋಜನೆಗೆ ನಾಂದಿ ಹಾಡಲಾಗಿದೆ. ಪ್ರತಿ ಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನಗರಸಭೆಯಿಂದ ಶೌಚಾಲಯ ನಿರ್ಮಾಣ, ಕಸದ ರಾಶಿ ತೆಗೆಯಲು ಕಬ್ಬಿಣದ ಕಸದ ಬುಟ್ಟಿ ಹೀಗೆ ವಿವಿಧ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
ಆದರೆ, ಈ ಬಾರಿ ಪರಿಸರ ಪೂರಕ ಇರಲಿ ಅನ್ನೋ ಕಾರಣಕ್ಕೆ ನಗರಸಭೆಯಿಂದ ತ್ಯಾಜ್ಯ ಮರುಬಳಕೆಯ ವಸ್ತುಗಳನ್ನು ಉಪಯೋಗಿಸಲಾಯಿತು. ಇದೀಗ ತ್ಯಾಜ್ಯ ಮರುಬಳಕೆ ಘಟಕವನ್ನು ಶಿರಸಿ ನಗರಸಭೆ ಸ್ಥಾಪಿಸೋಕೆ ಯೋಚನೆ ಮಾಡಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾಗುವ ಕಸವನ್ನು ಶಿರಸಿಗೆ ತಂದು ಈ ರೀತಿಯ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕಸದ ಮರುಬಳಕೆ ಸಾಧ್ಯವಾಗುತ್ತದೆ ಅಂತಾರೆ ಶಿರಸಿ ನಗರಸಭೆ ಆಯುಕ್ತ ಕೇಶವ ಚೌಗುಲೆ.
ಇನ್ನು ಇದನ್ನು ಮೊದಲು ಬಳಕೆಗೆ ತಂದಿದ್ದು ಮಲ್ನಾಡ್ ಎಂಟರ್ ಪ್ರೈಸಸ್ ಅನ್ನೋ ಸಂಸ್ಥೆ. ಮೂಲತಃ ಶಿರಸಿಯ ಸಂಸ್ಥೆಯ ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್ಸ್ ಪ್ರೊಡಕ್ಟ್ ಇದಾಗಿದೆ. ಹೈ ಕ್ವಾಲಿಟಿ ಪ್ಲಾಸ್ಟಿಕ್ ಇರುವ ಫುಡ್ ಗ್ರೇಡ್ ಪ್ಲಾಸ್ಟಿಕ್, ಔಷಧಗಳ ಸ್ಟ್ರಿಪ್, ಸಿರಪ್ ಬಾಟಲ್ಗಳನ್ನು ಉಪಯೋಗಿಸಿ ಪುಡಿ ಮಾಡಿ ಅದರಿಂದ ಕಸದ ಬುಟ್ಟಿ, ಶೌಚಾಲಯ, ಮನೆಯ ಮೇಲ್ಚಾವಣಿಯ ಶೀಟ್, ಕಪಾಟು, ದಿನಬಳಕೆಯ ಡೈರಿ ಸೇರಿದಂತೆ ಎಲ್ಲ ರೀತಿಯ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ಅದನ್ನು ಈ ಬಾರಿಯ ಜಾತ್ರೆಯಲ್ಲಿ ನಗರಸಭೆಯಿಂದ ಬಳಕೆ ಮಾಡಿಕೊಳ್ಳಲಾಗಿದ್ದು, ಸ್ವಚ್ಛ ಭಾರತ ಅಭಿಯಾನಕ್ಕೂ ಇದು ಸಹಕಾರಿ ಆಗಿದೆ. ತಳ್ಳು ಗಾಡಿ, ಕಸದಬುಟ್ಟಿ, ಶೌಚಾಲಯಗಳಿಗೆ 10 ವರ್ಷದ ರಿಪ್ಲೇಸ್ಮೆಂಟ್ ಗ್ಯಾರಂಟಿ ನೀಡಲಾಗಿದೆ. ಯಾವ ತುಕ್ಕು ಕೂಡ ಬಾರದ ಕಾರಣ ಇದರ ಬಳಕೆ ಸಾಕಷ್ಟು ಲಾಭದಾಯಕವೂ ಆಗಿದೆ.
ಕಳೆದ 25-30 ವರ್ಷಗಳಿಂದ ಈ ಸಂಸ್ಥೆ ಈ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ರೈತರಿಗೂ ಇದು ಅನುಕೂಲವಾಗುವ ಪ್ರೊಡಕ್ಟ್ಗಳಾಗಿದೆ. ಯಾವುದೇ ಕೆಮಿಕಲ್ ಉಪಯೋಗ ಮಾಡದೇ ನೈಸರ್ಗಿಕವಾಗಿ ಇದನ್ನು ತಯಾರು ಮಾಡಲಾಗುತ್ತಿದೆ. ಪರಿಸರಕ್ಕೆ ಪೂರಕವಾದ ವಸ್ತು ಇದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಿದೆ ಎನ್ನುವುದು ಸಂಸ್ಥೆಯ ಮಾಲೀಕ ಹರೀಶ್ ಹೆಗಡೆ ಅವರ ಅಭಿಪ್ರಾಯ.
ಪರಿಸರಕ್ಕೆ ಹಾನಿ ಉಂಟು ಮಾಡೋ ವಸ್ತುಗಳನ್ನ ತ್ಯಾಜ್ಯವಾಗಿ ಭೂಮಿಗೆ ಸೇರಿಸದೆ ಪುನರ್ಬಳಕೆ ಮಾಡೋ ಮೂಲಕ ಈ ತಂತ್ರಜ್ಞಾನ ಸ್ವಚ್ಛ ಭಾರತಕ್ಕೆ ತನ್ನ ಕೊಡುಗೆ ನೀಡುತ್ತಿದೆ. ಇಂತಹ ತಂತ್ರಜ್ಞಾನಗಳು ಇನ್ನೂ ಹೆಚ್ಚಾಗಿ ಬೆಳವಣಿಗೆ ಕಾಣೋ ಮೂಲಕ ರಾಜ್ಯದ ಎಲ್ಲಾ ಭಾಗಗಳಲ್ಲಿ ಇದರ ಉಪಯೋಗ ಆದಾಗ ಇದು ಕಸದ ಉತ್ತಮ ಪುನರ್ಬಳಕೆ ಆಗೋದ್ರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ: ಮಹಾನಗರ ಪಾಲಿಕೆಯಿಂದ ಭೂ ಸಮೃದ್ಧಿ: ಕಸದಲ್ಲಿಯೇ ರಸ ತೆಗೆಯುವ ಪ್ರಯತ್ನದತ್ತ ಪಾಲಿಕೆ