ಕಾರವಾರ: ಮಳೆಗಾಲ ಮುಗಿಯುವ ಹೊತ್ತಿಗೆ ತೆನೆಯೊಡೆದು ಬರುವ ಹೊಸ ಫಲವನ್ನು ಮನೆಗೆ ತರುವ ಕ್ಷಣವನ್ನು ಹೊಸ್ತಿನ ಹಬ್ಬವಾಗಿ ಕರಾವಳಿ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಒಂದೊಮ್ಮೆ ಈ ಹಬ್ಬ ಆಚರಣೆ ಆಗದೇ ಇದ್ದಲ್ಲಿ ಗ್ರಾಮದಲ್ಲಿ ಮತ್ಯಾವ ಹಬ್ಬವೂ ನಡೆಯುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಇಂದು ಊರಿನ ಜನರು ಒಂದಾಗಿ ಗದ್ದೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆಗಳನ್ನು ಮನೆ ತುಂಬಿಸಿ ಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕುಮಟಾದ ಬರ್ಗಿಯಲ್ಲಿ ಆಚರಿಸಲಾಗುವ ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಹೊಲಗಳಲ್ಲಿ ಫಸಲೊಡೆದ ಫಲವನ್ನು ಮನೆ ತುಂಬಿಸಿಕೊಳ್ಳುವ ಪೂರ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ವಾದ್ಯ ಮೇಳದೊಂದಿಗೆ ಜನರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಇದರಲ್ಲಿ ಊರಿನ ಎಲ್ಲ ಸಮುದಾಯದವರು ಒಟ್ಟಾಗಿಯೇ ಪಾಲ್ಗೊಂಡು ಹಬ್ಬ ಆಚರಣೆ ಮಾಡುವುದು ವಿಶೇಷ.
ಇನ್ನು ಬರ್ಗಿಯಲ್ಲಿ ಹೊಸ್ತಿನ ಹಬ್ಬದ ವೇಳೆ ಗ್ರಾಮ ದೇವತೆಗಳಾದ ಘಟಬೀರ, ಯಜಮಾನ ದೇವರ ಕಳಸವು ನೂರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತರಲಾಗುತ್ತದೆ. ದೇವಸ್ಥಾನದಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಿದ ಬಳಿಕ ಎರಡು ಕಳಸಗಳನ್ನು ಯಜಮಾನ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಇಡಲಾಗುತ್ತದೆ.
ನಂತರ ಘಟಬೀರ, ಯಜಮಾನ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಭಕ್ತರು ಸೇರಿ ಹೊಸ್ತಿ ಹಬ್ಬಕ್ಕೆ ಅಂತಾನೆ ಮೀಸಲಾಗಿಟ್ಟಿರುವ ಗದ್ದೆಗೆ ತೆರಳಿ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಗತ್ತೆ.
ಪೂಜೆಯ ನಂತರ ಕೊಯ್ದ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರತ್ತಾರೆ. ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ರೈತರು ಕೃಷಿ ಉಪಕರಣಗಳಿಗೆ ಕದರು ಕಟ್ಟಲಾಗತ್ತೆ.
ಮನೆಯಲ್ಲಿ ಧಾನ್ಯ ಲಕ್ಷ್ಮೀ ನೆಲೆಸಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಬರ್ಗಿಯಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯ ಬಹುದಾದ ಸಂಕ್ರಾಂತಿ ಸೇರಿದಂತೆ ಯಾವ ಹಬ್ಬ ಹರಿದಿನಗಳನ್ನು ಗ್ರಾಮದಲ್ಲಿ ಆಚರಿಸಲಾಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕರಾವಳಿಯಲ್ಲಿ ಸಂಪ್ರದಾಯ ಬದ್ಧ ಆಚರಣೆಗಳು ಜೀವಂತವಾಗಿದೆ ಎಂಬುದಕ್ಕೆ ಬರ್ಗಿ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ವಿಶಿಷ್ಟ ಹೊಸ್ತಿನ ಹಬ್ಬ ಕೂಡ ಸಾಕ್ಷಿಯಾಗಿದ್ದು, ಯುವ ಪೀಳಿಗೆ ಇಂತಹ ಸಂಪ್ರದಾಯಬದ್ಧ ಆಚರಣೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಇದು ಗ್ರಾಮಸ್ಥರ ಸಂತಸಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ನರಕ ಚತುರ್ದಶಿ ಆಚರಣೆ ಹಿಂದಿನ ಕಥೆ ಏನು.. ‘ಯಮ ಪ್ರದೀಪ’ದ ಬಗ್ಗೆ ನಿಮಗೆ ಎಷ್ಟು ಗೊತ್ತು?