ಕಾರವಾರ: ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣದ ಆತಂಕದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ತನ್ನ ಗಡಿಯನ್ನು ಸಂಪೂರ್ಣ ಬಂದ್ ಮಾಡಿದೆ. ಹೀಗಾಗಿ ನಿತ್ಯ ಗೋವಾಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಅಬ್ಬರ ಹೆಚ್ಚುತ್ತಿದೆ. ಇದು ಗಡಿ ರಾಜ್ಯಗಳಾದ ಗೋವಾ ಮತ್ತು ಕರ್ನಾಟಕದಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಆದರೆ ಇದೇ ಕಾರಣಕ್ಕೆ ಇದೀಗ ಗೋವಾ ಸರ್ಕಾರ ತನ್ನ ಗಡಿಯನ್ನು ಸಂಪೂರ್ಣ ಬಂದ್ ಮಾಡಿದೆ. ಇದರಿಂದಾಗಿ ಕರ್ನಾಟಕ-ಗೋವಾ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಗೋವಾ ಸರ್ಕಾರ ಸಂಪೂರ್ಣ ಬಂದ್ ಮಾಡಿದೆ.
ಈ ದಿಢೀರ್ ನಿರ್ಧಾರದಿಂದಾಗಿ ಗೋವಾಗೆ ನಿತ್ಯ ಕೆಲಸಕ್ಕೆ ತೆರಳಬೇಕಿದ್ದ ನೂರಾರು ಕಾರ್ಮಿಕರು ಹಾಗೂ ವಿವಿಧ ಕಂಪನಿ ಉದ್ಯೋಗಿಗಗಳು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ವಾಪಸ್ ತೆರಳಬೇಕಾಗಿದೆ. ಈ ವಿಚಾರವಾಗಿ ಸ್ಥಳೀಯರು ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಗಡಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಆರ್ಟಿ-ಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಇದೀಗ ಉದ್ಯೋಗಿಗಳು ನಿತ್ಯ ಆರ್ಟಿ-ಪಿಸಿರ್ ಟೆಸ್ಟ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸ್ಥಳೀಯರು ಹಾಗೂ ನಿತ್ಯ ಓಡಾಡುವ ಕಾರ್ಮಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.