ಭಟ್ಕಳ: ತಾಲೂಕಿನ ಜಾಲಿಯ ತಲಗೇರಿಯಲ್ಲಿ 6 ಎಕರೆ 7 ಗುಂಟೆ ಜಾಗದಲ್ಲಿ 3.86 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಶಂಕು ಸ್ಥಾಪನೆಯನ್ನು ಶಾಸಕ ಸುನೀಲ ನಾಯ್ಕ ಸೋಮವಾರದಂದು ನೆರವೇರಿಸಿದರು
ನಂತರ ಮಾತನಾಡಿದ ಅವರು ‘ಭಟ್ಕಳ ತಾಲೂಕು ರೂಪಗೊಂಡ ದಿನದಿಂದ ಇಲ್ಲಿಯ ತನಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕೆಂಬುದು ಇಲ್ಲಿನ ಸಾಕಷ್ಟು ಹಿರಿಯರ ಮಹಾದಾಸೆಯಾಗಿತ್ತು. ಇಂದು ಅವರ ಆರ್ಶೀವಾದದಿಂದ ಅದಕ್ಕೊಂದು ಆಯಾಮ ಸಿಕ್ಕಂತಾಗಿದೆ. ಶಾಸಕನಾದ ಸಂದರ್ಭದಲ್ಲಿ ಮೊದಲ ಸಂಕಲ್ಪವೆಂಬಂತೆ ಶಿಕ್ಷಣಕ್ಕೆ ಕೊರತೆಯಾಗದಂತೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇನೆ. ಭಟ್ಕಳದಲ್ಲಿ ಶಿಕ್ಷಣ ಕ್ರಾಂತಿ ಮಾಡಬೇಕೆಂಬ ಸುದುದ್ದೇಶದಿಂದ ಸರ್ಕಾರದಿಂದ ಬರುವ ವೇತನವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ಅದಕ್ಕಾಗಿಯೇ ವ್ಯಯಿಸಲಿದ್ದೇನೆ. ವಿದ್ಯಾರ್ಥಿಗಳು ತಾಲೂಕಿನಿಂದ ಹೊರಗಡೆ ಬೈಂದೂರು, ಕುಂದಾಪುರ ಹಾಗೂ ಉಡುಪಿ ವರೆಗೂ ಶಿಕ್ಷಣಕ್ಕಾಗಿ ತೆರಳುತ್ತಿದ್ದಾರೆ. ಮುಂದೆ ಸಮೀಪದಲ್ಲೇ ಅವರಿಗೆ ಸೂಕ್ತ ಶಿಕ್ಷಣ ದೊರಕುವುದರಿಂದ ಬಡ ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿದೆ ಎಂದರು.
ಪದವಿ ಪೂರ್ವ ಮತ್ತು ಐಟಿಐ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತಲಾ 4 ಎಕರೆ 26 ಗುಂಟೆ ಮತ್ತು 4 ಎಕರೆ ಸ್ಥಳವನ್ನು ಮಂಜೂರು ಮಾಡಿಸಲಾಗಿದ್ದು, ಸದ್ಯ ಅವು ಟೆಂಡರ್ ಹಂತದಲ್ಲಿವೆ. ಅಲ್ಲದೇ ಇಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ 4 ಎಕರೆ ಜಾಗ ಮಂಜೂರಾತಿ ಮಾಡಿಸಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೂ ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾನೂನು ಶಿಕ್ಷಣ ವಿದ್ಯಾಲಯಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಂದೇ ಸೂರಿನಡಿ ಎಲ್ಲಾ ಶಿಕ್ಷಣಗಳು ಸಿಗುವಂತೆ ವ್ಯವಸ್ಥೆಯನ್ನು ಕಲ್ಪಿಸುವುದು ನನ್ನ ಗುರಿ ಎಂದರು.