ಕಲಬುರಗಿ: ರೌಡಿಶೀಟರ್ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳ ಮಹಜರು ಮಾಡಲು ತೆರಳಿದ್ದಾಗ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಮೊಹ್ಮದಿ ಚೌಕ್ ನಿವಾಸಿ ರಸೂಲ್ ಅಹ್ಮದ್ (39), ಅಬ್ದುಲ್ ಸಮದ್ (33) ಹಾಗೂ ಯದುಲ್ಲಾ ಕಾಲೋನಿಯ ಸೋಶಿಯಲ್ ಮೀಡಿಯಾ ವರದಿಗಾರ ಮೊಸಿನ್ ಅಹ್ಮದ್ (28) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಅವರು ತಿಳಿಸಿದ್ದಾರೆ.
ಇಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರುಸ್ತುಮ್ ರೌಡಿಶೀಟರ್ ಕೃತ್ಯಕ್ಕೆ ಬಳಸಿದ ಚಾಕು, ಮೋಟಾರ್ ಸೈಕಲ್ ಜಪ್ತಿ ಮಾಡಲು ಪೊಲೀಸರು ತೆರಳಿದ್ದರು. ಆಗ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿ ಪಡೆಸಿರುವುದಾಗಿ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದರು.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೆಗೌಡ ವಿ.ಎಸ್ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕುಬೇರ್ ಎಸ್. ರಾಯಮಾನೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ - ಮೂವರು ಸುಲಿಗೆಕೋರರ ಬಂಧನ : ಪ್ರತ್ಯೇಕ ಪ್ರಕರಣದಲ್ಲಿ, ರಾತ್ರಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು ಬೆಲೆ ಬಾಳುವ ವಸ್ತು ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ಸುಲಿಗೆಕೋರರನ್ನು ಬಂಧಿಸುವಲ್ಲಿ ಕಲಬುರಗಿಯ ರಾಘವೇಂದ್ರನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
![three-accused-arrest](https://etvbharatimages.akamaized.net/etvbharat/prod-images/15-02-2025/23550528_thumbnd.jpg)
ಆಳಂದ ಚೆಕ್ಪೋಸ್ಟ್ ಹತ್ತಿರದ ಅಹ್ಮದ್ ನಗರ ನಿವಾಸಿ ಮಹ್ಮದ್ ಶಹಬಾಜ್ ಪುಟಾನಘರ್ (25), ಡಬರಾಬಾದ ಕ್ರಾಸ್ ಹೌಸಿಂಗ್ ಬೋರ್ಡ್ ನಿವಾಸಿ ಮಹ್ಮದ್ ಅರ್ಬಾಜ್ (19) ಮತ್ತು ಸಮೀರ್ ಷಾ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ದೇವರದಾಸಿಮಯ್ಯ ನಗರದ ನಿವಾಸಿಗಳಾದ ಪರಮೇಶ್ವರ ನಂಜುಂಡೆ ಮತ್ತು ಅವರ ಅಳಿಯ ಶಿವಾನಂದ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ರಿಂಗ್ರೋಡ್ ಮಾರ್ಗವಾಗಿ ವಾಟರ್ ಫಿಲ್ಟರ್ ಎದುರಿನ ಸರ್ವಿಸ್ ರಸ್ತೆಯ ಮೇಲೆ ಬರುತ್ತಿದ್ದಾಗ, ನಾಲ್ವರು ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ 12 ಸಾವಿರ ರೂ.ಮೌಲ್ಯದ ಮೊಬೈಲ್ ದೋಚಿಕೊಂಡು ಹೋಗಿದ್ದರು ಎಂದು ರಾಘವೇಂದ್ರನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದ್ದು, ಮೂವರು ಸುಲಿಗೆಕೋರರನ್ನು ಬಂಧಿಸಲಾಗಿದೆ. ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಆಟೋ ಚಾಲಕನಿಂದ ಹಲ್ಲೆ ಬಳಿಕ ಕುಸಿದು ಬಿದ್ದು ಗೋವಾ ಮಾಜಿ ಶಾಸಕ ಸಾವು