ಕಾರವಾರ: ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದಲ್ಲಿರುವ ಶ್ರೀ ಜಗದೀಶ್ವರಿದೇವಿ ಅಮ್ಮನವರ ದರ್ಶನಕ್ಕೆ ಆಗಮಿಸಿರುವ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಅಂಕೋಲಾದಲ್ಲಿ ಜಗದೀಶ್ವರಿದೇವಿ ದರ್ಶನ ಪಡೆದ ಡಿ ಕೆ ಶಿವಕುಮಾರ್.. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಅಂಕೋಲಾಕ್ಕೆ ಬಂದ ಅವರು, ಅಲ್ಲಿಂದ ಕಾರಿನ ಮೂಲಕ ಬೆಂಬಲಿಗರೊಂದಿಗೆ ಆಗಮಿಸಿದ ಡಿ ಕೆ ಶಿವಕುಮಾರ್ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ ದೇವಾಲಯ ಪ್ರವೇಶಿಸಿದ್ದಾರೆ.
ದೇವಿ ದೇವಸ್ಥಾನದಲ್ಲಿ ಪೋಟೊ, ವಿಡಿಯೋ ಸೇರಿದಂತೆ ಇನ್ನಿತರ ಕಟ್ಟುಪಾಡುಗಳು ಇರುವ ಕಾರಣ ಮಾಧ್ಯಮದವರು ಹಾಗೂ ಬೆಂಬಲಿಗರಿಗೆ ದೇವಸ್ಥಾನದ ಹೊರಗೆ ಇರುವಂತೆ ಸೂಚಿಸಿದ ಅವರು, ಬಳಿಕ ದೇವಸ್ಥಾನದ ಒಳಗೆ ತೆರಳಿ ವಿಶೇಷ ಪೂಜಾ ಕಾರ್ಯದಲ್ಲಿ ತೊಡಗಿದ್ದಾರೆ.
ಆಂದ್ಲೇ ಗ್ರಾಮದಲ್ಲಿರುವ ಜಗದೀಶ್ವರಿದೇವಿ ಶಕ್ತಿಯುತ ದೇವತೆ. ಬೇಡಿದ್ದನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ಡಿ ಕೆ ಶಿವಕುಮಾರ್ ತಾಯಿ ಮೊದಲಿನಿಂದಲೂ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು. ಇದೀಗ ಡಿ ಕೆ ಶಿವಕುಮಾರ್ಗೆ ನ್ಯಾಯಾಲಯದಿಂದ ಜಾಮೀನು ದೊರೆತ ಹಿನ್ನೆಲೆಯಲ್ಲಿ ದೇವಿ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.