ಶಿರಸಿ : 40 ದಿನಗಳ ಹೆಣ್ಣು ಮಗುವಿನ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಮನಕೊಪ್ಪದಲ್ಲಿ ನಡೆದಿದೆ.
ರಾಮನಕೊಪ್ಪ ನಿವಾಸಿ ಹಾಗೂ ದೇವಾಲಯವೊಂದರ ಅರ್ಚಕ ಚಂದ್ರಶೇಖರ್ ನಾಗೇಶ್ ಭಟ್ ಅವರ ಹೆಣ್ಣು ಮಗು ಇದಾಗಿದ್ದು, ಹೆಣ್ಣು ಮಗು ಎನ್ನುವ ಕಾರಣಕ್ಕಾಗಿ ಮನೆಯವರೇ ಮಗುವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಮನೆಯಲ್ಲಿ ಮಗು ಮಲಗಿದ್ದ ಸಂದರ್ಭದಲ್ಲಿ ಯಾರೋ ಮಗುವನ್ನು ಎತ್ತಿಕೊಂಡು ಹೋಗಿ ಬಾವಿಗೆ ಎಸೆದಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.