ಉಡುಪಿ : ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆ, ದರ್ಶನ ಸಮಯವನ್ನು ವಿಸ್ತರಿಸಲಾಗಿದ್ದು, ಇಂದಿನಿಂದ ಮಠದಲ್ಲಿ ಹೊಸ ಸಮಯಸೂಚಿ ಜಾರಿಗೆ ಬರಲಿದೆ.
ಮಳೆ ಕಡಿಮೆಯಾಗುತ್ತಿದ್ದಂತೆ ಕೃಷ್ಣನ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ, ಕೋವಿಡ್ ಹಿನ್ನೆಲೆ ದರ್ಶನಕ್ಕೆ ಸೀಮಿತ ಸಮಯ ಅವಕಾಶ ಇರುವುದರಿಂದ ದೂರದ ಊರುಗಳಿಂದ ಬಂದ ಭಕ್ತರಿಗೆ ಅದೇ ದಿನ ದರ್ಶನ ಸಾಧ್ಯವಾಗುತ್ತಿ. ಮರು ದಿನದವರೆಗೂ ಕಾದು ದರ್ಶನ ಮಾಡಬೇಕಿತ್ತು, ಕೆಲವರಿಗೆ ದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಭಕ್ತರ ಅಪೇಕ್ಷೆಯಂತೆ ಕೃಷ್ಣನ ದರ್ಶನ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಕೊರೊನಾ ನಂತರ ಕಳೆದ ಸೆಪ್ಟೆಂಬರ್ 28 ರಿಂದ ಕೃಷ್ಣ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಸಮಯ ನಿಗದಿಪಡಿಸಿ ಮಧ್ಯಾಹ್ನ 2 ರಿಂದ 5 ಗಂಟೆಯ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಹೊಸ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 8.30 ರಿಂದ 10 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.