ಉಡುಪಿ: ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಸಲೂನ್ಗಳು ಬಂದ್ ಆಗಿರುವುದರಿಂದ ಹೇರ್ ಕಟಿಂಗ್, ಶೇವಿಂಗ್ ಮಾಡದೆ ಜನಕ್ಕೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಲಾಕ್ ಆಗಿರೋರು ತಮ್ಮ ಹೇರ್ ಕಟಿಂಗ್ ತಾವೇ ಮಾಡಿಕೊಳ್ತಾ ಇದ್ದಾರೆ. ಆದರೆ ಹೊರ ಜಿಲ್ಲೆಯಿಂದ ಬಂದು ನಿರಾಶ್ರಿತರ ಕೇಂದ್ರದಲ್ಲಿ ಇರುವ ಜನರು ಹೇರ್ ಕಟಿಂಗ್, ಶೇವಿಂಗ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಜನಸಾಮಾನ್ಯರ ಸಂಕಷ್ಟ ಅರಿತುಕೊಂಡ ಜಿಲ್ಲೆಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಶೇವಿಂಗ್ ಕಿಟ್ಗಳನ್ನು ವಿತರಿಸಿದ್ದಾರೆ. ಉಡುಪಿಯ ಇಂದಿರಾ ಕ್ಯಾಂಟೀನ್ ಬಳಿ ಪ್ರತಿನಿತ್ಯ ನೂರಾರು ಮಂದಿ ನಿರ್ಗತಿಕರು, ಹೊರ ಜಿಲ್ಲೆ-ಹೊರ ರಾಜ್ಯದ ಕಾರ್ಮಿಕರು ಊಟಕ್ಕೆ ಬರ್ತಾರೆ. ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಆವರಣಕ್ಕೆ ಬಂದ ನಿತ್ಯಾನಂದ ಒಳಕಾಡು ಸೋಪು, ಬ್ಲೇಡ್, ಯೂಸ್ ಅಂಡ್ ಥ್ರೋ ಶೇವಿಂಗ್ ಕಿಟ್ ಮತ್ತು ಬ್ರಶ್ಗಳನ್ನು ನೀಡಿದರು.
ಉಡುಪಿ ಟೌನ್ ಟ್ರಾಫಿಕ್ ಎಸ್ಐ ಅಬ್ದುಲ್ ಖಾದರ್ ಶೇವಿಂಗ್ ಕಿಟ್ಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಮಿ ರಂಜನ್ ಕಲ್ಕೂರ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಿದರು. ಎಸ್ಐ ಖಾದರ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ನಿರ್ಗತಿಕರು, ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಜನರು ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಅನ್ನ ದಾನಕ್ಕಿಂತ ದೊಡ್ಡದಾದ ದಾನ ಬೇರೆ ಇಲ್ಲ. ಹಸಿದವನಿಗೆ ಅನ್ನ ಹಾಕುವುದು ದೇವರು ಮೆಚ್ಚುವ ಕಾರ್ಯ ಎಂದು ಹೇಳಿದರು.
ಇನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಕಷ್ಟದಲ್ಲಿರುವವರಿಗೆ ಆಹಾರ ಕೊಡುವುದು ಎಷ್ಟು ಮುಖ್ಯವೋ ಅವರ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ ಎಂದರು.