ಉಡುಪಿ: ಭೂಮಿಯಿಂದ ಆಕಾಶಕ್ಕೆ ವಿಮಾನ ಟೇಕಾಫ್ ಆಗುವುದು ಸರ್ವೇ ಸಾಮಾನ್ಯ. ಆದರೆ ಅದೇ ವಿಮಾನ ಸಮುದ್ರ ಅಥವಾ ನದಿಯ ನೀರಿನ ಮೇಲಿನಿಂದ ಆಗಸಕ್ಕೆ ಹಾರಿದರೆ..! ಆ ಅನುಭವ ಬಲು ರೋಚಕ.
ಹೀಗೆ ನೀರಿನ ಮೇಲೆ ಹಡಗಿನಂತೆ ತೇಲುತ್ತಾ ಬಂದು ಗಗನದತ್ತ ಸಾಗುವ ಸೀಪ್ಲೇನ್. ಇದು ಸಿದ್ಧವಾಗಿದ್ದು ಕೃಷ್ಣನಗರಿ ಉಡುಪಿಯಲ್ಲಿ. ಇತ್ತೀಚೆಗೆ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತದ ಚರ್ಚೆ ಜೋರಾಗಿಯೇ ನಡೀತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಈ ಮೈಕ್ರೋಲೈಟ್ ಸೀಪ್ಲೇನ್ ಯಶಸ್ವಿ ಹಾರಾಟ ಕೂಡ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಭಾರತದ ಮೊದಲ ಸೀಪ್ಲೇನ್ ಉದ್ಘಾಟಿಸಿದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಇದೀಗ ಅದೇ ಮಾದರಿಯ ಪ್ಲೇನ್ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಯಶಸ್ವಿಯಾಗಿ ಹಾರಾಡುತ್ತಿದೆ. ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್.
ಏರ್ ಮಾಡೆಲಿಂಗ್, ಎನ್ಸಿಸಿ ಇನ್ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್, 15 ವರ್ಷಗಳ ಕಾಲ ಶ್ರಮ ವಹಿಸಿ ಈ ಮೈಕ್ರೋಲೈಟ್ ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ಧೃತಿ ಎಂಬ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ತಯಾರಿಸಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ಸಿದ್ಧಗೊಳಿಸಿದ ಪುಷ್ಪರಾಜ್, ಮುಂದೆ 7 ಜನ ಕುಳಿತು ಹಾರುವ ಸಾಮರ್ಥ್ಯದ ವಿಮಾನ ತಯಾರಿಸುವ ಕನಸು ಹೊಂದಿದ್ದಾರೆ.
ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ತೂಕ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ, ಸ್ಟೀಲ್ನಿಂದ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್, 33 ಎಚ್.ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್ನ ಮರದ ಪ್ರೊಫೆಲ್ಲರ್ ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಚಲಿಸಿ ಆಗಸಕ್ಕೆ ಹಾರುತ್ತದೆ.
ಈ ವಿಮಾನ ನಿರ್ಮಾಣಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಪುಷ್ಪರಾಜ್ ಮೈಕ್ರೋಲೈಟ್ ಸೀಪ್ಲೇನ್ ತಯಾರಿಸಿದ್ದಾರೆ. ಗೆಳೆಯರ ಸಂಬಂಧಿಕರೇ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಯಂತ್ರಗಳಿಗೆ ಸಹಾಯಧನ ನೀಡಬೇಕು ಎಂದು ಯುವಕರು ಮನವಿ ಮಾಡಿದ್ದಾರೆ.