ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್ನಲ್ಲಿ ಮಗುವಿನ ಶವವನ್ನು ಗುಂಡಿಯಿಂದ ಹೊರತೆಗೆಸಿ ಬೇರೆಡೆ ಶವ ಸಂಸ್ಕಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ನೊಂದ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದೆ.
ಮಗುವಿನ ಶವ ಹೊರತೆಗೆದ ಜಾಗಕ್ಕೆ ಭೇಟಿ ನೀಡಿದ ನಿಯೋಗ ಬಳಿಕ ಬೇರೆ ಕಡೆ ಶವಸಂಸ್ಕಾರ ಮಾಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿನೆ ನಡೆಸಿತು. ಅಧಿಕಾರಿಗಳಿಗೆ ಈ ಸ್ಥಳದ ಸರ್ವೇ ವರದಿ ತಕ್ಷಣವೇ ನೀಡಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯ ಹಾಗೂ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ ಸೂಚಿಸಿದರು.
ಶವಸಂಸ್ಕಾರದ ಮಗುವಿನ ಶವ ಹೊರತೆಗೆಸಿ ಬೇರೆಡೆ ಶವಸಂಸ್ಕಾರ ನಡೆಸಿದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಕುಟುಂಬಕ್ಕೆ ಮನೆ ಇಲ್ಲದಿರುವುದನ್ನು ಕಂಡು ಮನೆ ಮಂಜೂರಾತಿ ಪತ್ರ ಕೊಡಿಸಿದರು.
ಎತ್ತಿನಹೊಳೆ ಕಾಮಗಾರಿಯ ಸ್ಫೋಟದಿಂದಾಗಿ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಜನರ ಅಹವಾಲುಗಳನ್ನು ವೆಂಕಟೇಶ್ ದೊಡ್ಡೇರಿ ಆಲಿಸಿದರು. ಆನಂತರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕಂದಾಯ, ಪೊಲೀಸ್, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ಕೊರಟಗೆರೆ ತಾಲೂಕಿನ ಎಸ್ಸಿ, ಎಸ್ಟಿ ಜನಾಂಗದವರಿಗೆ ಸ್ಮಶಾನಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಎಸ್ಸಿ, ಎಸ್ಟಿ ಜನಾಂಗದವರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸುವಂತೆ ವೆಂಕಟೇಶ್ ದೊಡ್ಡೇರಿ ನಿರ್ದೇಶಿಸಿದರು.
ಶವಸಂಸ್ಕಾರವಾದ ಮಗುವಿನ ಶವ ತೆಗೆದು ಬೇರೆಡೆ ಸಂಸ್ಕಾರ ಮಾಡಿರುವ ಘಟನೆ ನಡೆದಿರುವುದು ಶೋಚನೀಯ. ಇಂತಹ ಘಟನೆ ತಾಲೂಕಿನಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಘಟಿಸಬಾರದು. ದಲಿತರು ದೇವಸ್ಥಾನ ಒಳಗಡೆ ಹೋಗಬಾರದು ಎಂಬ ಅನಿಷ್ಟ ಪದ್ಧತಿ ಇದ್ದರೆ ಅದನ್ನು ತೊಡೆದು ಹಾಕಬೇಕು. ತಾಲೂಕಿನಲ್ಲಿ 232 ಗ್ರಾಮಗಳ ಪೈಕಿ 218 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ಎಲ್ಲಾ ಸಮುದಾಯದವರು ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ 42 ಹಳ್ಳಿಗಳಲ್ಲಿ ಮಾತ್ರ ದಲಿತರಿಗೆ ಸ್ಮಶಾನ ನೀಡಲಾಗುತ್ತಿದೆ. ಉಳಿದ ಹಳ್ಳಿಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯವಿದ್ದರೂ ಅಲ್ಲಿಯೂ ಸ್ಮಶಾನ ಸ್ಥಳ ಗುರುತಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಾತನಾಡಿ, ಘಟನೆ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದೆ. ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ಜಂಪೇನಹಳ್ಳಿ ಕ್ರಾಸ್ನಲ್ಲಿ ಜಮೀನಿನ ಮಾಲೀಕರು ಶವ ಸಂಸ್ಕಾರ ಮಾಡಲು ಅವಕಾಶ ನೀಡದಿರುವುದು ನಾಗರಿಕರ ಸಮಾಜ ಇದನ್ನು ಒಪ್ಪುವುದಿಲ್ಲ. ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದರು.
ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಮತ್ತು ಸರ್ಕಾರದಿಂದ ಸಿಗುವ ಸವಲತ್ತು ಒದಗಿಸಲು ಹಾಗೂ ಪರಿಶಿಷ್ಟ ಜಾತಿ ವರ್ಗಗಳ ಸಮಸ್ಯೆಗಳನ್ನು ಆಲಿಸಿ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಭೇಟಿ ನೀಡಿದ್ದೇನೆ. ಅಹಿತಕರ ಘಟನೆ ನಡೆದ ಸ್ಥಳದ ಮಾಲೀಕರ ಜೊತೆ ಮಾತನಾಡಿದ್ದೇನೆ. ನದಿ ತೀರದ ಪ್ರದೇಶ ಆಗಿರುವುದರಿಂದ ಅಲ್ಲಿ ಸ್ವಲ್ಪ ಜಾಗ ಕೊಟ್ಟರೆ ನೊಂದ ಕುಟುಂಬಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಪರಾಮರ್ಶೆ ಮಾಡಲಾಗಿದೆ ಎಂದು ವೆಂಕಟೇಶ್ ದೊಡ್ಡೇರಿ ಹೇಳಿದರು.