ತುಮಕೂರು: ಧರ್ಮದ ಗುರುವೊಬ್ಬರ ಬಗ್ಗೆ ಪ್ರಚೋದನಾತ್ಮಕವಾಗಿ ಫೇಸ್ಬುಕ್ನಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ಅತುಲ್ ಸಬರವಾಲ್ ಅಲಿಯಾಸ್ ಮಧುಗಿರಿ ಮೋದಿ ಎಂಬಾತನ ಫೇಸ್ ಅಕೌಂಟ್ ಕುರಿತು ಕ್ರಮ ತೆಗೆದುಕೊಳ್ಳಲು ಫೇಸ್ಬುಕ್ಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಫೇಸ್ಬುಕ್ ಮೂಲಕ ಹೇಳಿಕೆಗಳನ್ನು ಅಪ್ಲೋಡ್ ಮಾಡುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದೆ ಎಂದು ಪತ್ರ ಬರೆಯಲಾಗಿದೆ. ಮೂರರಿಂದ ನಾಲ್ಕು ದಿನಗಳ ನಂತರ ಫೇಸ್ಬುಕ್ ನಿಂದ ಉತ್ತರ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಧರ್ಮಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿರುವ ಕುರಿತು ವಿಡಿಯೋ ವೈರಲ್ ಆಗಿರುವುದು ಕಂಡುಬಂದ ತಕ್ಷಣ ಅವರನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದರು.
ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ 153ಎ, 295ಎ,67 ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಬಗ್ಗೆ ಶಿರಾ, ತುಮಕೂರು ನಗರ, ಮಧುಗಿರಿಯಲ್ಲಿಯೂ ಮೂರು ಕಡೆ ಧರ್ಮ ಗುರುಗಳು ದೂರು ನೀಡಿದ್ದಾರೆ ಎಂದರು.
ಒಂದು ಧರ್ಮದ ಗುರುಗಳು ಮತ್ತು ಮುಖಂಡರು ಇದರಿಂದ ಪ್ರಚೋದನೆಗೆ ಒಳಗಾಗಬಾರದು. ವೈಯಕ್ತಿಯವಾಗಿ ನಿಂದಿಸಿರುವುದರಿಂದ ನಾವು ಶಿಸ್ತು ಕ್ರಮ ತೆಗೆದುಕೊಳ್ಳತ್ತೇವೆ. ಶಾಂತಿ ಕಾಪಾಡುವಂತೆ ಎಸ್ಪಿ ಮನವಿ ಮಾಡಿದ್ರು.
ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಜಯನಗರ ಪೊಲೀಸ್ ಠಾಣೆಯಲ್ಲಿಯೂ 153 ಪ್ರಕಾರ ಪ್ರಕರಣವೊಂದು ದಾಖಲಾಗಿದೆ. ರೌಡಿಶೀಟರ್ ಆಗಿಯೂ ಈತನನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.