ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಸಿದ್ಧ ಕುಪ್ಪೂರು ಗದ್ದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (45) ಇಂದು ಲಿಂಗೈಕ್ಯರಾದರು. ಮಠಕ್ಕೆ ಸ್ವಾಮೀಜಿ ಪಾರ್ಥಿವ ಶರೀರವನ್ನು ತರಲಾಗಿದ್ದು, ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ಶ್ರೀಗಳು ವಿಪರೀತ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ, ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಲಘು ಹೃದಯಾಘಾತದಿಂದ ಅಸುನೀಗಿದ್ದಾರೆ.
ವ್ಯೋಮಕೇಶಯ್ಯ ಮತ್ತು ದೇವಿರಮ್ಮ ದಂಪತಿಯ ಪುತ್ರನಾಗಿ 1974ರ ಜುಲೈ 29ರಂದು ಇವರು ಜನಿಸಿದ್ದರು. ಐವರು ಮಕ್ಕಳಲ್ಲಿ ಇವರು ನಾಲ್ಕನೆಯವರು. ಪ್ರೌಢಶಿಕ್ಷಣ ಮುಗಿಸಿ ಪದವಿಪೂರ್ವ ಕಾಲೇಜಿಗೆ ಸೇರಿಕೊಳ್ಳುವ ಮುನ್ನವೇ ಮಠದ ಗದ್ದುಗೆಯೇರುವ ಸಂದರ್ಭ ಉಂಟಾಯಿತು. ಅಂತೆಯೇ 16ನೇ ವಯಸ್ಸಿನಲ್ಲಿಯೇ ಮಠದ ಉತ್ತರಾಧಿಕಾರಿಯಾದರು. ಬೆಂಗಳೂರಿನ ಮುಡುಕುತೊರೆಯಲ್ಲಿ ಮಹಾಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ವೇದ, ಸಂಸ್ಕೃತ, ಆಗಮ, ಜ್ಯೋತಿಷ್ಯ, ಮುಂತಾದ ವಿದ್ಯೆಗಳನ್ನು ಕಲಿತರು.
'ವೀರಶೈವ ಧಾರ್ಮಿಕ ಸಂಸ್ಕಾರಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ' ಎಂಬ ಮಹಾಪ್ರಬಂಧಕ್ಕೆ ಶ್ರೀಲಂಕಾದ ಕೊಲಂಬೋ ವಿವಿ ಡಾಕ್ಟರೇಟ್ ನೀಡಿ ಶ್ರೀಗಳನ್ನು ಪುರಸ್ಕರಿಸಿತ್ತು. ಅನೇಕ ಸಮಾಜಮುಖಿ ಚಟುವಟಿಕೆಗಳಿಂದ ಮನೆಮಾತಾಗಿದ್ದ ಸ್ವಾಮೀಜಿ, ನೀರಾವರಿ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಸಿದ್ಧಗಂಗಾ ಮಠದ ಹಲವಾರು ಕಾರ್ಯಗಳಲ್ಲಿ ಇವರು ಉತ್ಸಾಹದಿಂದ ಭಾಗವಹಿಸುತ್ತಿದ್ದರು.