ತುಮಕೂರು: ತಮ್ಮ ಮೂಲ ವಕೀಲ ವೃತ್ತಿಗೆ ಮರಳಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕುಣಿಗಲ್ ಹಿರಿಯ ಸಿವಿಲ್ ನ್ಯಾಯಾಯಲದಲ್ಲಿ ಸಿವಿಲ್ ಮೊಕದ್ದಮೆಯೊಂದರಲ್ಲಿ ವಾದ ಮಂಡಿಸಿದ್ದಾರೆ.
ಸರಿ ಸುಮಾರು 25 ವರ್ಷಗಳ ನಂತರ ವಕೀಲ ವೃತ್ತಿಗೆ ಮರಳಿರುವ ಮುದ್ದಹನುಮೇಗೌಡರು, ನ್ಯಾಯಾಲಯಕ್ಕೆ ಕಪ್ಪು ಕೋಟು ಧರಿಸಿ ಆಗಮಿಸಿದ ವೇಳೆ ವಕೀಲರ ಸಂಘದ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
![Former MP Muddahanumegowda comeback to his law care](https://etvbharatimages.akamaized.net/etvbharat/prod-images/13991285_thumb.jpg)
ಹನುಮೇಗೌಡರು ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗುವ ಮೊದಲು ವಕೀಲ ವೃತ್ತಿ ಹಾಗೂ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. ಆನಂತರ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಅಲ್ಲದೇ ಕುಣಿಗಲ್ನಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿ ನಂತರ ತುಮಕೂರು ಲೋಕಸಭೆ ಕ್ಷೇತ್ರಕ್ಕೆ ಒಮ್ಮೆ ಸಂಸದರಾಗಿ ಚುನಾಯಿತರಾಗಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳ ನಂತರ ನಗೆ ನ್ಯಾಯಾಲಯದಲ್ಲಿ ವಾದ ಮಂಡಿಸುವ ಅವಕಾಶ ದೊರೆತಿದೆ. ಕುಣಿಗಲ್ ತಾಲೂಕು ನನಗೆ ಎಲ್ಲಾ ರೀತಿಯ ಶಕ್ತಿ ನೀಡಿದೆ. ಶಾಸಕನಾಗಿ, ಸಂಸದನಾಗಿ ಮತ್ತು ವಿಶ್ವಸಂಸ್ಥೆಯಂತಹ ದೊಡ್ಡ ಸಂಸ್ಥೆಯಲ್ಲಿ ಭಾಗವಹಿಸಿ ಮಾತನಾಡುವ ಅವಕಾಶವನ್ನು ನೀಡಿದೆ.
ಇದಕ್ಕೆ ಕುಣಿಗಲ್ ನ್ಯಾಯಾಲಯವೇ ಸ್ಫೂರ್ತಿ. ಕಾರಣ ನಾನು ಮೊದಲು ವಕೀಲ ವೃತ್ತಿಯನ್ನು ಕುಣಿಗಲ್ ನ್ಯಾಯಾಲಯದಿಂದಲೇ ಆರಂಭಿಸಿದ್ದೆ. ಇನ್ಮುಂದೆ ಕುಣಿಗಲ್ ತಾಲೂಕಿನ ಜನತೆಗೆ ನನ್ನ ಕೈಲಾದ ಸೇವೆ ಸಲ್ಲಿಸುವ ಉದ್ದೇಶದಿಂದ ಕ್ರಿಯಾಶೀಲರಾಗಿ ಮುಂದುವರೆಯುವೆ ಎಂದರು.
ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಹಿಡನ್ ಅಜೆಂಡಾ ಇಲ್ಲ, ನಮ್ಮದು ಓಪನ್ ಅಜೆಂಡಾ: ಗೃಹ ಸಚಿವ ಆರಗ ಜ್ಞಾನೇಂದ್ರ