ಶಿವಮೊಗ್ಗ: ಸರ್ಕಸ್ ಮಾಡಿದ್ರು ಸಹ ಬಿಜೆಪಿ ಶಾಸಕರ ಒಗ್ಗಟ್ಟು ಮುರಿಯಲು ಆಗಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಪತ್ರಿಕೆಯವರು, ಟಿವಿಯವರಿಗೆ ಸುದ್ದಿ ಬೇಕು. ಹಾಗಾಗಿ ಹಾಕ್ತಿದ್ದೀರಾ ಅಂತ ಮಾಧ್ಯಮದವರ ವಿರುದ್ಧ ಗರಂ ಆಗಿ, ಬಿಜೆಪಿಯ ಶಾಸಕರ ಒಗ್ಗಟ್ಟು, ಏಕತೆ ಒಡೆಯಲು ಯಾವುದೇ ಪತ್ರಿಕೆ, ಟಿವಿಯಿಂದ ಆಗಲ್ಲ ಎಂದರು.
ಬಿಜೆಪಿ ಶಾಸಕರು ಒಟ್ಟಾಗಿದ್ದೇವೆ, ಒಟ್ಟಾಗಿ ಪ್ರಯತ್ನ ಮಾಡ್ತೇವೆ. ರಾಜ್ಯ ಸರ್ಕಾರದ ಬಗ್ಗೆ ಕೇಂದ್ರದ ನಾಯಕರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಕೇಂದ್ರದ ನಾಯಕರು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪನವರ ಬದಲಾವಣೆ ಇಲ್ಲ ಅಂತ ತಿಳಿಸಿದ್ದಾರೆ ಎಂದರು.
ಯಾವುದೋ ಒಂದು ಪತ್ರಿಕೆಯಲ್ಲಿ, ಯಾವುದೋ ಒಂದು ಟಿವಿಯಲ್ಲಿ ಯಡಿಯೂರಪ್ಪ ಅವರ ಅಧಿಕಾರವಧಿ ಮುಗಿದೇ ಹೋಯ್ತು, ಹೊಸ ಸಿಎಂ ಪ್ರತಿಜ್ಞಾ ವಿಧಿ ತೆಗೆದುಕೊಂಡೇ ಬಿಟ್ಟರು ಅಂತಾ ತೋರಿಸುತ್ತಿದ್ದಾರೆ. ಪತ್ರಿಕೆ, ಟಿವಿಯವರು ನಮ್ಮ ಪಕ್ಷದ ಮೇಲೆ ಡಾಮಿನೇಟ್ ಮಾಡೋಕೆ ಸಾಧ್ಯವಿಲ್ಲ ಎಂದರು.
ಬಿಜೆಪಿಯ ಎಲ್ಲಾ ವಿಚಾರದ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಅಲ್ಲ. ಇದು ಯಾರೋ ಬರುತ್ತಾರೆ, ಯಾರೋ ಹೋಗ್ತಾರೆ ಅನ್ನೋಕೆ, 17 ಜನ ಶಾಸಕರು ಹೋದ್ರೂ ಅವರ ಬಗ್ಗೆ ಯಾವುದೇ ಕ್ರಮ ಕಾಂಗ್ರೆಸ್ ತೆಗೆದುಕೊಳ್ಳಲಿಲ್ಲ. ಎಲ್ಲರೂ ಬಿಜೆಪಿಗೆ ಬಂದು ಚುನಾವಣೆಯಲ್ಲಿ ಗೆದ್ದರು ಎಂದು ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಅಂಶವನ್ನು ಕೇಂದ್ರದ ನಾಯಕರು ಘೋಷಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸ್ಪಷ್ಟವಾಗಿ ಹೇಳುತ್ತೇನೆ ಎಂದ ಅವರು, ಅವಶ್ಯಕತೆ ಇದ್ದಾಗ ಶಾಸಕಾಂಗ ಸಭೆ ಕರೆಯುತ್ತಾರೆ. ವಿಧಾನ ಮಂಡಲದಲ್ಲಿ ಏನು ಸಮಿತಿ ಇದೆ ಆ ಸಮಿತಿ ಸಭೆ ನಡೆಯುತ್ತಿಲ್ಲ. ಕ್ಯಾಬಿನೆಟ್ ನಡೆಸಲು ಸಹ ಹಿಂದೆ ಮುಂದೆ ನೋಡುತ್ತಿದ್ದೇವೆ. ಶಾಸಕಾಂಗ ಸಭೆ ಕರೆಯಬೇಕು ಅಂತಾ ಯಾರು ಕೇಳಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಶಾಸಕಾಂಗ ಸಭೆ ಏಕೆ ಬೇಕು. ಎಲ್ಲಾ ಶಾಸಕರು ಅವರವರ ಕ್ಷೇತ್ರದಲ್ಲಿ ಕೋವಿಡ್ ದೂರ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಶಾಸಕರ ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ. ಅವರವರ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ಶಾಸಕರಿಗೆ ಪುರಸೊತ್ತು ಇಲ್ಲ. ಶಾಸಕಾಂಗ ಸಭೆ ಏನು ಅವಶ್ಯಕತೆ ಇದೆ. ಸುಮ್ಮನೆ ರಾಜಕಾರಣ ಬೆರೆಸುವ ಪ್ರಯತ್ನ ಮಾಡೋದು ಸೂಕ್ತವಲ್ಲ ಎಂದರು.
ಓದಿ: ವಿಶ್ವಪ್ರಿಯ ಫೈನಾನ್ಸ್ ವಂಚನೆ : ತನಿಖಾ ಸಂಸ್ಥೆಗೆ ವಹಿಸಲು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್