ಶಿವಮೊಗ್ಗ: ಮನೆಗೆ ನುಗ್ಗಿದ್ದ ಇಬ್ಬರು ದರೋಡೆಕೋರರಿಗೆ ಸ್ಥಳೀಯರೇ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಗರದ ಆನಂದಪುರಂ ಬಳಿಯ ಯಡೇಹಳ್ಳಿಯ ಚೆನ್ನಪ್ಪ ಎಂಬುವರ ಮನೆಗೆ ಇಬ್ಬರು ದರೋಡೆಕೋರರು ನುಗ್ಗಿ ದರೋಡೆಗೆ ಯತ್ನಿಸಿದ್ದರು. ಈ ವೇಳೆ ಚೆನ್ನಪ್ಪ ಅವರ ಪತ್ನಿ ಜೋರಾಗಿ ಕೂಗಿಕೊಂಡಾಗ ಅಕ್ಕ ಪಕ್ಕದವರು ಬಂದು ಇಬ್ಬರನ್ನು ಪ್ರಶ್ನಿಸಿದಾಗ ಸರಿಯಾಗಿ ಉತ್ತರಿಸದೆ ತಡಬಡಾಯಿಸಿದ್ದರು. ಇದರಿಂದ ಇವರಿಬ್ಬರು ಕಳ್ಳರೇ ಎಂದು ತಿಳಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚೆನ್ನಾಗಿ ಥಳಿಸಿದ ವೇಳೆ ಇಬ್ಬರು ತಾವು ಶಿವಮೊಗ್ಗದ ತುಂಗಾ ನಗರದ ನಿವಾಸಿ ಶೇಖರ್ ಹಾಗೂ ಚಾಲುಕ್ಯ ನಗರದ ಕೃಷ್ಣಪ್ಪ ಎಂದು ಹೇಳಿಕೊಂಡಿದ್ದಾರೆ. ಇವರ ಬಳಿ ದರೋಡೆಗಾಗಿ ಬಳಸುತ್ತಿದ್ದ ಖಾರದಪುಡಿ, ಮಚ್ಚು, ಹಾಗೂ ದೊಣ್ಣೆಗಳು ಸಿಕ್ಕಿವೆ. ಇಬ್ಬರನ್ನು ವಶಕ್ಕೆ ಪಡೆದ ಸಾಗರ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.