ಶಿವಮೊಗ್ಗ: ನಗರದ ಜನರು ಇನ್ನು ಮುಂದೆ ಯಾವುದೇ ಸಮಸ್ಯೆ, ಸಲಹೆ ಇದ್ದರೂ ವಾಟ್ಸ್ಆ್ಯಪ್ ಮೂಲಕ ಶಾಸಕರ ಕಚೇರಿಗೆ ನೇರವಾಗಿ ತಿಳಿಸಿ, ಪರಿಹಾರ ಪಡೆಯುವ ನೂತನ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.
ಸ್ಮಾರ್ಟ್ ಶಿವಮೊಗ್ಗ ವಾಟ್ಸ್ಆ್ಯಪ್ ಹೆಲ್ಪ್ಲೈನ್: ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ನಾಗರಿಕರು ಮೂಲ ಸೌಕರ್ಯಗಳ ಸಮಸ್ಯೆ ಹಂಚಿಕೊಳ್ಳಲು ಸ್ಮಾರ್ಟ್ ಶಿವಮೊಗ್ಗ, ‘ನಿಮ್ಮ ನುಡಿ, ನಮ್ಮ ನಡೆ ಎಂಬ ವಾಟ್ಸ್ಆ್ಯಪ್ ಹೆಲ್ಪ್ಲೈನ್ ಆರಂಭಿಸಲಾಗಿದೆ. ಈ ಮೂಲಕ ನಗರದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಮೆಸೇಜ್ ಮೂಲಕ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದ ಮೂಲ ಸೌಕರ್ಯ ಸಮಸ್ಯೆಗೆ ಸಿಗಲಿದೆ ಪರಿಹಾರ : ಸಾರ್ವಜನಿಕರು ಮೊ 9019901177 ಈ ವಾಟ್ಸ್ಆ್ಯಪ್ ನಂಬರ್ಗೆ ತಮ್ಮ ಬಡಾವಣೆಯ ಯಾವುದೇ ಮೂಲ ಸಮಸ್ಯೆ, ಸಲಹೆಗಳ ಬಗ್ಗೆ ಮೆಸೇಜ್ ಮಾಡಬಹುದು. ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸೂಕ್ತ ಪರಿಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲಿ ಸಲಹಾಪಟ್ಟಿಗೆ ಇಟ್ಟು ಅಲ್ಲಿಯೂ ಕೂಡ ಸಾರ್ವಜನಿಕರು ಮುಕ್ತವಾಗಿ ಮುಂದಿನ ಐದು ವರ್ಷ ಶಿವಮೊಗ್ಗ ನಗರ ಹೇಗೆ ಕಾಣಬೇಕು ಎಂಬ ತಮ್ಮ ಸಲಹೆ ಅಭಿಪ್ರಾಯ ಸೂಚಿಸಬಹುದು ಎಂದರು.
ಶಿವಮೊಗ್ಗ ನಗರದ ನಾಗರಿಕರ ಸಹಭಾಗಿತ್ವದಲ್ಲಿ ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಶಿವಮೊಗ್ಗ ನಗರವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ವ್ಯವಸ್ಥೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೇ ನಾಗರಿಕರು ಅವರ ಸಮಸ್ಯೆಗಳನ್ನು ಸಹ ಮೆಸೇಜ್ ಮುಖಾಂತರ ಕರ್ತವ್ಯ ಭವನಕ್ಕೆ ತಲುಪಿಸಿದರೆ ಅದನ್ನು ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಕರ್ತರ ಮುಖಾಂತರ ಸೀಮಿತ ಅವಧಿಯೊಳಗೆ ಬಗೆಹರಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ಜನರ ಹಾಗೂ ಜನಪ್ರತಿನಿಧಿಯ ನಡುವೆ ಸಂಪರ್ಕ ಸಾಧನೆಗೆ ಅನುವಾಗುವ ರೀತಿ ಒಂದು ಪ್ರಮುಖ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ಕರ್ತವ್ಯ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದ ಅವರು, ಪಕ್ಷಭೇದ ಇಲ್ಲದೇ ಎಲ್ಲಾ ವಾರ್ಡುಗಳು, ಕಾರ್ಪೊರೇಟರ್ಗಳ ಸಹಾಯವನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಾರ್ವಜನಿಕರು ಹಸಿರು ನಗರ, ಸ್ವಚ್ಛ ನಗರ, ಸಾಂಸ್ಕೃತಿಕ ನಗರ, ಆರೋಗ್ಯಕರ ನಗರ, ಆಡಳಿತ ಮತ್ತು ಅಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ, ಶೈಕ್ಷಣಿಕ, ಕ್ರೀಡೆ ಹೀಗೆ ಹಲವು ವಿಷಯಗಳನ್ನು ಇಟ್ಟುಕೊಂಡು ಸಮಸ್ಯೆಗಳ ಬಗ್ಗೆ ಸಲಹೆಯನ್ನೂ ನೀಡಬಹುದು ಎಂದು ಶಾಸಕರು ವಿವರಣೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯಕ್, ಪಾಲಿಕೆ ಸದಸ್ಯ ಇ. ವಿಶ್ವಾಸ್, ವಿಶ್ವನಾಥ್, ಮಂಜುನಾಥ್ ಮತ್ತಿತರರು ಇದ್ದರು
ಇದನ್ನೂ ಓದಿ : ಬಜೆಟ್ನಲ್ಲಿ ಕೈ ಬಿಟ್ಟ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ.. ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಸರ್ಕಾರವೇಕೆ ಮೌನ?