ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪನವರು 2010ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶೇಷ ಹಕ್ಕುಗಳ ಭೂಮಿಯನ್ನು ಅರಣ್ಯ ಭೂಮಿ ಎಂದು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಬಗರ್ ಹುಕುಂ ಸಾಗುವಳಿದಾರರು ಮನೆ, ಮಠ ಕಳೆದುಕೊಂಡು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಆರೋಪಿಸಿದೆ.
ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 11.02.2010 ಹಾಗೂ 03.05.2010ರಲ್ಲಿ ಎರಡು ಬಾರಿ ಸುತ್ತೋಲೆ ಹೊರಡಿಸಿ, ಸರ್ಕಾರದ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಬೆಟ್ಟ, ಜಮ ಬಾಣೆ ಹಾಗೂ ಇನ್ನಿತರ ಭೂಮಿಗಳನ್ನು ಅರಣ್ಯ ಭೂಮಿ ಎಂದು ಹಾಗೂ ಈ ಎಲ್ಲಾ ಭೂಮಿಗಳನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಮಂಜೂರು ಮಾಡಬಾರದು ಎಂದು ಆದೇಶಿಸಿದೆ. ಇದು ಮಲೆನಾಡಿನ ರೈತರಿಗೆ ಮಾರಕವಾಗಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಹಾಗೂ ಇನ್ನಿತರ ಮಲೆನಾಡಿನ ಜಿಲ್ಲೆಗಳಲ್ಲಿ ಬಡ ರೈತರು ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳೆಲ್ಲ ಈಗ ತಿರಸ್ಕಾರಗೊಂಡಿವೆ.
ಅಷ್ಟೇ ಅಲ್ಲ, ಕರ್ನಾಟಕ ಭೂ ಕಬಳಿಕೆ ವಿಶೇಷ ಕಾಯ್ದೆ 2011ರ ಅಡಿ ಭೂಗಳ್ಳರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಭೂಮಿ ಹಾಗೂ ಮನೆ ಮಾಲೀಕತ್ವ ಕಳೆದುಕೊಂಡು ಜೈಲು ಮತ್ತು ದಂಡದ ಶಿಕ್ಷೆ ಅನುಭವಿಸುವುದು ಅನಿವಾರ್ಯ ಎಂದರು.
ಓದಿ:ರಾಮ ಮಂದಿರಕ್ಕೆ ಶಿವಮೊಗ್ಗದಲ್ಲೂ ನಿಧಿ ಸಂಗ್ರಹ ಕಾರ್ಯ
ಬಿ ಎಸ್ ಯಡಿಯೂರಪ್ಪನವರು 4ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಿ ತಾವೊಬ್ಬ ಹುಟ್ಟು ರೈತ ಹೋರಾಟಗಾರರೆಂದು ಪ್ರತಿಬಿಂಬಿಸಿಕೊಂಡಿದ್ದಾರೆ. ಇಂತಹವರು ಈಗ ಈ ಕಾನೂನನ್ನು ಜಾರಿಗೆ ತಂದು ರೈತರಿಗೆ ಮರಣ ಶಾಸನ ತಂದಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಉಳುವವನೇ ಭೂಮಿ ಒಡೆಯ ಎಂದು ಕಾನೂನು ತಂದ್ರೆ, ಬಿಜೆಪಿ ಸರ್ಕಾರ ಉಳ್ಳವನೇ ಭೂಮಿ ಒಡೆಯ ಎಂಬ ಕಾನೂನು ತಂದಿದೆ. ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಬಡವರಿಗೆ ಸಾಗುವಳಿ ಹಕ್ಕು ನೀಡಲು ಅನುಕೂಲವಾಗುವಂತೆ ನಮೂನೆ-53ರಲ್ಲಿ ಸಲ್ಲಿಸಲು ಅವಕಾಶ ನೀಡಿತ್ತು.
ಆದರೆ, ಈಗ ಕಾಯ್ದೆ ತಿದ್ದುಪಡಿಯಿಂದ ಜಿಲ್ಲೆಯಲ್ಲಿ ಸುಮಾರು 26, 942 ಬಗರ್ ಹುಕುಂ ಸಾಗುವಳಿದಾರರು 83,566 ಎಕರೆ ಸಾಗುವಳಿ ಭೂಮಿಯನ್ನು ಸಕ್ರಮ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ತಿದ್ದುಪಡಿ ಕಾನೂನಿನಿಂದ ಇವರೆಲ್ಲರೂ ಈಗ ಭೂಮಿ ಹಕ್ಕನ್ನು ಕಳೆದುಕೊಂಡು ಆತ್ಮಹತ್ಯೆಯ ದಾರಿ ತುಳಿದ್ರೆ ಆಶ್ಚರ್ಯವೇನೂ ಇಲ್ಲ ಎಂದರು.