ಶಿವಮೊಗ್ಗ: ಅನಧಿಕೃತ ಕ್ವಾರೆಗಳನ್ನು ನಡೆಸುತ್ತಿರುವವರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹುಣಸೋಡು ಸ್ಫೋಟದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 76 ಅಧಿಕೃತ ಕ್ವಾರೆಗಳಿವೆ ಹಾಗೂ 34 ಅನಧಿಕೃತ ಕ್ವಾರೆಗಳಿವೆ. ಅನಧಿಕೃತ ಕ್ವಾರೆಗಳನ್ನು ಆದಷ್ಟು ಬೇಗ ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ ಎಂದರು.
ಅಧಿಕೃತ 76 ಕ್ವಾರೆಗಳ ಪೈಕಿ 23 ಕ್ವಾರೆಗಳಿಗೆ ಮಾತ್ರ ಬ್ಲಾಸ್ಟಿಂಗ್ ಅನುಮತಿ ಇದೆ. ಹಾಗೇಯೇ 97 ಕ್ರಶರ್ಗಳು ಜಿಲ್ಲೆಯಲ್ಲಿವೆ. ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿದ್ದರು ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕರ್ನಾಟಕದಲ್ಲಿರುವ ಎಲ್ಲ ಅನಧಿಕೃತ ಕ್ವಾರೆಗಳನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ಅನಂತ್ ಹೆಗಡೆ ಆಶಿಸರ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರ ಹೆಸರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ: ಸಚಿವ
ಕಾಂಗ್ರೆಸ್ ಪಕ್ಷ ಕ್ಕೆ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ಕಳೆದುಕೊಂಡ ನಂತರ ನೀರಿನಿಂದ ಹೊರಬಂದ ಮೀನಿನಂತೆ ಅವರ ಪರಿಸ್ಥಿತಿ ಆಗಿದೆ. ಅಧಿಕಾರ ಬಿಟ್ಟು ಇರಲು ಆಗುತ್ತಿಲ್ಲ. ಹಾಗಾಗಿ ರೈತರ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ, ಮೇರವಣಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಎಲ್ಲ ರೈತರು ಕಾಯ್ದೆಗಳ ಬಗ್ಗೆ ಸಂತೋಷ ಪಡುತ್ತಿದ್ದಾರೆ. ರೈತರ ಉತ್ಪನ್ನವನ್ನು ಹೆಚ್ಚಿನ ಬೆಲೆ ಎಲ್ಲಿ ಸಿಗುತ್ತೋ ಅಲ್ಲಿ ಮಾರುತ್ತಾರೆ. ಅದಕ್ಕೆ ಇಡೀ ದೇಶದ ರೈತರು ಒಪ್ಪಕೊಂಡಿದ್ದಾರೆ. ಆದರೆ ಕಾಂಗ್ರೆಸ್ನವರು ಟ್ರಾಕ್ಟರ್ ಮೇಲೆ ಹಸಿರು ಟವಲ್ ಹಾಕಿಕೊಂಡು ನಾವೇ ರೈತರು ಎಂದು ಮಾಡುತ್ತಿರುವ ಪ್ರತಿಭಟನೆಗೆ ಯಾವ ರೈತರ ಬೆಂಬಲ ಇಲ್ಲಾ. ಕಾಂಗ್ರೆಸ್ನವರ ಈ ದುಷ್ಕೃತ್ಯಕ್ಕೆ ದೇಶದ ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ತಿಳಿಸಿದರು.