ಶಿವಮೊಗ್ಗ : ಈಟಿವಿ ಭಾರತ ಪ್ರಸಾರ ಮಾಡಿದ ಸುದ್ದಿಯಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿ ಹಾಗೂ ಪೈನಾಪಲ್ಗಳನ್ನು ಎಪಿಎಂಸಿ ಮೂಲಕ ಖರೀದಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ. ನಿನ್ನೆ ಈ ಟಿವಿ ಭಾರತ 'ಸಂಕಷ್ಟದಲ್ಲಿ ಪೈನಾಪಲ್, ಕಲ್ಲಂಗಡಿ ಬೆಳೆದ ರೈತರು' ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿ ಡಿಸಿ, ನಿನ್ನೆ ಸೊರಬ ಹಾಗೂ ಸಾಗರಕ್ಕೆ ಭೇಟಿ ನೀಡಿದಾಗ ರೈತರು ಸಹ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
ಸೊರಬದಲ್ಲಿ ಪೈನಾಪಲ್ ಸಂಸ್ಕರಿಸಿ ವಿವಿಧ ಉತ್ಪನ್ನ ತಯಾರಿಸುವ ಮೂರು ಅಗ್ರೋ ಕಾರ್ಖಾನೆಗಳಿವೆ. ಈ ಕಾರ್ಖಾನೆಯ ಮಾಲೀಕರ ಜೊತೆ ಮಾತನಾಡಿದ್ದೇವೆ. ಅವರು ತಮ್ಮ ಕಾರ್ಖಾನೆಯನ್ನು ಇಂದು ತೆಗೆಯುವುದಾಗಿ ತಿಳಿಸಿದ್ದಾರೆ. ಇದ್ದ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ತೋಟಗಾರಿಕಾ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರು ತೋಟಗಾರಿಕ ಬೆಳೆಗಳನ್ನು ಎಪಿಎಂಸಿ ಮೂಲಕ ಖರೀದಿ ಮಾಡಿ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಸಾಗಾಟಕ್ಕೆ ಲಾರಿ ಮಾಲೀಕರ ಸಂಘದ ಜೊತೆ ಸಹ ಸಭೆ ನಡೆಸಲಿದ್ದಾರೆ ಎಂದರು.
ಸಂಕಷ್ಟದಲ್ಲಿ ಫೈನಾಪಲ್, ಕಲ್ಲಂಗಡಿ ಬೆಳೆದ ರೈತರು..
ಈಗ ಎಲ್ಲಾ ಕಡೆ ಲಾಕ್ಡೌನ್ ಆಗಿರುವ ಕಾರಣ ಬೇರೆ ರಾಜ್ಯದಲ್ಲೂ ಸಹ ಮಾರುಕಟ್ಟೆ ಇರುವುದಿಲ್ಲ. ಇದರಿಂದ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದೆ. ಅವರು ನೀಡುವ ಸೂಕ್ತ ಮಾರ್ಗದರ್ಶನದಂತೆ ಕ್ರಮಕೈಗೊಳ್ಳಲಾಗುವುದು. ನಮ್ಮ ರಾಜ್ಯದಲ್ಲಿಯೇ ಬಳಕೆ ಮಾಡಿ ಕೊಳ್ಳಬಹುದೇ ಎಂಬ ಚಿಂತನೆ ನಡೆದಿದೆ. ಎಷ್ಟು ಸಾಧ್ಯವೋ ಅಷ್ಟು ಬಳಕೆ ಮಾಡಿಕೊಳ್ಳುವ ಚಿಂತನೆ ಇದೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಯಾವ ರೈತರು ನಾಶ ಮಾಡಬಾರದು. ಬೆಳೆಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಸಭೆ ನಡೆಸಲಾಗಿದೆ. ಎಲ್ಲದ್ದಕ್ಕೂ ಒಂದು ಪರಿಹಾರ ಇರುತ್ತದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್, ಜಿಲ್ಲೆಯ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.