ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳು ಒತ್ತಾಯಕ್ಕೆ ಮಣಿದು ನಿನ್ನೆ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಶಿವಮೊಗ್ಗ ವಿನೋಬನಗರದ ತಮ್ಮ ನಿವಾಸದಲ್ಲಿ ಭದ್ರಾವತಿ ತಾಲೂಕಿನ ಕಾರ್ಯಕರ್ತರು ತಂದಿದ್ದ 80 ಕೆಜಿ ತೂಕದ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಯಡಿಯೂರಪ್ಪ ಕೇಕ್ ಕತ್ತರಿಸಿದರು. ಈ ವೇಳೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿವೈ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ ವಿಜಯೇಂದ್ರರವರು ಸೇರಿದಂತೆ ಇತರ ಮುಖಂಡರು ಹಾಜರಿದ್ದರು. ಇನ್ನು ವಿವಿಧ ಸಂಘಟನೆಯ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು ಬಿಎಸ್ ಯಡಿಯೂರಪ್ಪ ಅವರಿಗೆ ಜನುಮದಿನದ ಶುಭಾಶಯ ಕೋರಿ ಸನ್ಮಾನಿಸಿದರು.
ನಿನ್ನೆ ಬೆಳ್ಳಗ್ಗೆಯಿಂದಲೇ ಅಭಿಮಾನಿಗಳು, ಮುಖಂಡರುಗಳು ಸೇರಿದಂತೆ ಅನೇಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇವರ ಹುಟ್ಟು ಹಬ್ಬದ ಅಂಗವಾಗಿ ಇಂದು ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಲಿದ್ದಾರೆ.
ಬಿಎಸ್ವೈಗೆ ಶುಭ ಕೋರಿದ ಪ್ರಹ್ಲಾದ ಜೋಶಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಿಎಸ್ವೈ ಅವರ ಮನೆಗೆ ಭೇಟಿ ನೀಡಿ ಜನುಮ ದಿನದ ಶುಭಾಶಯ ಕೋರಿದರು. ಜೋಶಿ ಅವರು ಇಂದು ನಡೆಯಲಿರುವ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ನಿನ್ನೆ ಆಗಮಿಸಿದ್ದಾರೆ. ಹಾಗಾಗಿ ಬಿಎಸ್ವೈ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ನಂತರ ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿಎಚ್ ಶಂಕರ್ ಮೂರ್ತಿ ಮನೆಗೆ ಭೇಟಿ ನೀಡಿ ಪಕ್ಷದ ಸಂಘಟನೆ ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
![former CM BS Yeddyurappa former CM BS Yeddyurappa 80th birthday Yeddyurappa 80th birthday celebration former CM BS Yeddyurappa news ಅಭಿಮಾನಿಗಳು ತಂದ 80 ಕೆಜಿ ಕೇಕ್ ಕತ್ತರಿಸಿ ಜನ್ಮದಿನ ಜನ್ಮದಿನ ಆಚರಿಸಿಕೊಂಡ ರಾಜಹುಲಿ ಇಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಜನ್ಮದಿನ ಸಿಎಂ ಬಿಎಸ್ ಯಡಿಯೂರಪ್ಪರಿಗೆ ಜನ್ಮದಿನದ ಶುಭಾಶಯ ಬಿಎಸ್ವೈಗೆ ಶುಭ ಕೋರಿದ ಪ್ರಹ್ಲಾದ ಜೋಶಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಾಗೂ ಕ್ಷಣ](https://etvbharatimages.akamaized.net/etvbharat/prod-images/kn-smg-06-bsy-birthday-update-ka10011_26022023232306_2602f_1677433986_858.jpg)
ಇಂದು ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದೊಂದಿಗೆ ಇತರ ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿಯವರು ನೆರವೇರಿಸುವರು. ವಿಮಾನ ನಿಲ್ದಾಣ ಲೋಕಾರ್ಪಣೆಗೆ ಹಾಗೂ ಇತರೆ ಕಾಮಗಾರಿಗಳ ಲೋಕಾರ್ಪಣೆಗೆ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಲಾಗಿದ್ದು, ಇಡೀ ನಗರವೇ ಪ್ರಧಾನಿ ಸ್ವಾಗತಕ್ಕಾಗಿ ಸಿಂಗಾರಗೊಂಡು ಸಜ್ಜಾಗಿದೆ.
‘ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಾಗೂ ಕ್ಷಣ’: ಸೋಮವಾರ ಶಿವಮೊಗ್ಗ ಏರ್ಪೋರ್ಟ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟಿಸುತ್ತಿದ್ದಾರೆ. ಈ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಾಗೂ ಕ್ಷಣ. ಪ್ರಧಾನಿ ಮೋದಿಯವರೇ ನನ್ನ ಜನ್ಮದಿನದಂದು ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುತ್ತಿರುವುದು ಸಂತೋಷದ ಸಂಗತಿ. ಸೋಮವಾರದ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪ ವಿನಂತಿಸಿದರು.
ಓದಿ: ಇಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ.. ಕಾರ್ಯಕ್ರಮಗಳ ಪೂರ್ಣ ವಿವರ