ಶಿವಮೊಗ್ಗ : ಹೋರಿ ಬೆದರಿಸುವ ವೇಳೆ ಹೋರಿ ತಿವಿದು ನಾಲ್ವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ರಾಕೇಶ್ ಎಂಬಾತನಿಗೆ ಹೋರಿ ತಿವಿದಿದೆ. ಇದರಿಂದ ರಾಕೇಶ್ ಎಡ ಕಾಲು ಮುರಿದಿದೆ. ರಾಕೇಶ್ ಶಿವಮೊಗ್ಗ ತಾಲೂಕು ಹಾರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ತನ್ನ ಸ್ನೇಹಿತರ ಜೊತೆ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಅವಘಡ ಜರುಗಿದೆ.
ಇದೇ ತಾಲೂಕಿನ ಶಿವಾಜಿ ಕಣಿಯ ಗ್ರಾಮದ ನಿವಾಸಿ ಹನುಮಂತ ಎಂಬಾತ ತನ್ನ ಸ್ನೇಹಿತನ ಜೊತೆ ಕಪ್ಪನಹಳ್ಳಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಹೋರಿ ತಿವಿದು ಗಾಯಗೊಂಡಿದ್ದಾನೆ. ಸದ್ಯ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಕಾರಿಪುರ ಪಟ್ಟಣದ ದೊಡ್ಡಕೇರಿಯಲ್ಲಿ ಹೋರಿ ಬೆದರಿಸುವ ವೇಳೆ ಸಂದೀಪ್ ಎಂಬ ಯುವಕನ ಹೊಟ್ಟೆ ಹಾಗೂ ಬೆನ್ನಿಗೆ ಗುದ್ದಿದೆ. ಅಲ್ಲದೆ, ಸೋನು ಎಂಬ ಯುವಕನಿಗೂ ಸಹ ಹೋರಿ ಗುದ್ದಿದ ಪರಿಣಾಮ ಬಿದ್ದು ತಲೆಗೆ, ಬೆನ್ನಿಗೆ ತೀವ್ರ ಗಾಯವಾಗಿದೆ. ಇವರನ್ನು ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ಗೆ ರವಾನಿಸಲಾಗಿದೆ.
ಉಡುಗಣಿ ಗ್ರಾಮದಲ್ಲಿ ಜೀಯಾ ಎಂಬ ಯುವಕ ಹೋರಿ ಹಿಡಿಯಲು ಹೋದಾಗ ತಲೆಗೆ ಪೆಟ್ಟು ಬಿದ್ದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲೆಯಲ್ಲಿ ಅವಕಾಶವಿಲ್ಲ. ಆದರೂ ಸಹ ರಾಜಕೀಯ ಪ್ರಭಾವದಿಂದ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.