ಶಿವಮೊಗ್ಗ: ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಚಲನಚಿತ್ರ ನಟಿಯರು ಬಿರುಸಿನ ಪ್ರಚಾರ ನಡೆಸಿದರು.
ಸೊರಬ ತಾಲೂಕಿನ ಆನವಟ್ಟಿಯಲ್ಲಿ ಸಾರ್ವಜನಿಕ ಬಹೃತ್ ಸಮಾವೇಶ ಕುರಿತು ಮಾತನಾಡಿದ ಚಲನಚಿತ್ರ ನಟಿ ಶೃತಿ, ಚುನಾವಣಾ ಸಭೆಗಳಲ್ಲಿ ಮಹಿಳೆಯರು ಸೇರುವುದು ಬಹಳ ಕಡಿಮೆ. ಆದರೆ ಇಲ್ಲಿ ಸೇರಿರುವ ಮಹಿಳೆಯರನ್ನ ನೋಡಿದರೆ ತಿಳಿಯುತ್ತದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮಹಿಳೆಯರಿಗಾಗಿ ಮಾಡಿದ ಯೋಜನೆಗಳಾದ ಹಾಗೂ ನರೇಂದ್ರ ಮೋದಿ ಅವರು ನೀಡಿದ ಹಲವು ಯೋಜನೆಗಳು ಭಾರತದಲ್ಲಿ ವಾಸಿಸುತ್ತಿರುವವರಿಗೆ ಇಂದು ಸಿಗುತ್ತಿದೆ, ಹಾಗಾಗಿ ಜನರು ಮತ್ತೊಮ್ಮೆ ಮೋದಿ ಎಂದು ಹೇಳುತ್ತಿದ್ದಾರೆ ಎಂದರು.
2014ರ ಚುನಾವಣೆಯಲ್ಲಿ ಮೋದಿ ಗೆದ್ದಾಗ ದೇಶವನ್ನು ಹೇಗೆ ನಡೆಸುತ್ತಾರೆ ಎಂದು ತಿಳಿದಿರಲಿಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ಅವರು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಹಾಗಾಗಿ ಅವರಿಗೆ ಮತ ನೀಡಬೇಕು ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶವನ್ನು ದುರ್ಬಲಗೊಳಿಸುವ ಪ್ರಣಾಳಿಕೆ ಎಂದು ಆರೋಪಿಸಿದ ಶೃತಿ, ಪ್ರಣಾಳಿಕೆಯಲ್ಲಿ ಅನೇಕ ಅಂಶಗಳು ದೇಶಕ್ಕೆ ಆಪತ್ತು ತರುವಂತಿವೆ. ಕಾಂಗ್ರೆಸ್ನವರು ನಾವು ಹುಟ್ಟುವ ಮೊದಲಿನಿಂದಲೂ ಗರೀಬಿ ಹಠಾವೋ ಎಂದು ಅಜ್ಜಿ ಹೇಳುತ್ತಿದ್ದರು. ಈಗ ಮೊಮ್ಮಗನೂ ಕೂಡ ಗರೀಬಿ ಹಟಾವೋ ಎನ್ನುತ್ತಿದ್ದಾರೆ. ಇದು ಯಾವಾಗ ಹಠಾವೋ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಸ್ವತಂತ್ರಕ್ಕಾಗಿ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದ ಹಾಗೆ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ದೇಶ ಬಿಟ್ಟು ಓಡಿಸಬೇಕು ಎಂದು ಕರೆ ನೀಡಿದರು.
ಜನ ಜೆಡಿಎಸ್ ಎಲ್ಲಿದ್ದೀಯಪ್ಪ ಎನ್ನುತ್ತಾರೆ:
ಇದೇ ವೇಳೆ ಮಾತನಾಡಿದ ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಈಗ ಜನ ನಿಖಿಲ್ ಎಲ್ಲಿದಿಯಪ್ಪ ಎನ್ನುತ್ತಿದ್ದಾರೆ. ಚುನಾವಣೆ ಆದ ನಂತರ ಜೆಡಿಎಸ್ ಎಲ್ಲಿದ್ದೀಯಪ್ಪ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
2004 ರಲ್ಲಿ ಬಂಗಾರಪ್ಪಜಿ ಮತ್ತು ಯಡಿಯೂರಪ್ಪನವರು ಸೇರಿ ಬಿಜೆಪಿಯನ್ನು ಕಡಿಮೆ ಸ್ಥಾನದಿಂದ ಹೆಚ್ಚು ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಹಾಗೆಯೇ ಇಂದು ಬಿಜೆಪಿ ಪಕ್ಷ ಬಹುದೊಡ್ಡದಾಗಿ ಬೆಳೆದಿದೆ, ಲೋಕಸಭಾ ಚುನಾವಣೆಯ ನಂತರ ಮತ್ತೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.