ರಾಮನಗರ : ಆಹಾರ ಅರಸಿ ಬಂದ ಕರಡಿಯೊಂದು ಬಾವಿಗೆ ಬಿದ್ದ ಘಟನೆ ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಬಾವಿ ಇದ್ದಿದ್ದರಿಂದ ರೈತರು ಕರಡಿ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಆದರೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕರಡಿ ಬಾವಿಗೆ ಬಿದ್ದಿರುವುದು ಗೊತ್ತಾಗಿದ್ದು, ಕೂಡಲೇ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾವಿಗೆ ಏಣಿ ಇಟ್ಟು ಕರಡಿಗೆ ಮೇಲೆ ಹತ್ತುವ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಏಣಿ ಹತ್ತಿ ಮೇಲೆರಿದ ಕರಡಿ ಕಾಡಿನತ್ತ ತೆರಳಿದೆ.
ಕಾರ್ಯಾಚರಣೆಯಲ್ಲಿ ರಾಮನಗರ ವಲಯ ಅರಣ್ಯಾಧಿಕಾರಿ ಧಾಳೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ವೆಂಕಟೇಶ್, ವಾಸು, ಅರಣ್ಯ ರಕ್ಷಕರಾದ ನಾರಾಯಣ, ರವಿ, ಗುರುಲಿಂಗಯ್ಯ, ಶ್ರೀನಿವಾಸ್, ನಾಗೇಂದ್ರ, ಮಂಜು, ಪ್ರಕಾಶ್ ಇತರರು ಇದ್ದರು.