ರಾಮನಗರ: ತಾಲೂಕಿನ ಕೂಟಗಲ್ ಸೇರಿ ಹಲವೆಡೆ ಇರುಳಿಗರು (Iruliga people) ವಾಸ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಮೂಲಭೂತ ಸೌಕರ್ಯ ವ್ಯವಸ್ಥೆ ಇಲ್ಲ. ಈಗ ಆ ಜನರ ಬದುಕು ಬಹಳ ಕಷ್ಟಕರವಾಗಿದೆ ಎಂದು ಇರುಳಿಗರ ಪರವಾಗಿ ನಟ ಚೇತನ್ ಮಾತನಾಡಿದ್ದಾರೆ.
ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇರುಳಿಗರ ಜೀವನ ಸಂಕಷ್ಟದಲ್ಲಿದೆ. ಜೀವನ ನಡೆಸುವುದೇ ದುಸ್ತರವಾಗಿದ್ದು ಆಡಳಿತ ನಡೆಸುವ ಸರ್ಕಾರಗಳು ಗಮನಹರಿಸಬೇಕು. ಇರುಳಿಗ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗಬಾರದು. ರಾಜಕಾರಣಿಗಳು ಕೇವಲ ಮತ ಸೆಳೆಯುತ್ತಾರೆ ಅಷ್ಟೇ. ಆದಿವಾಸಿಗಳ ಬಗ್ಗೆ ಯಾರಿಗೂ ಕೂಡ ಚುನಾವಣೆ ಮುಗಿದ ಮೇಲೆ ಗಮನವಿಲ್ಲ ಎಂದಿದ್ದಾರೆ.
ನಾನು ರಾಮನಗರ ಜಿಲ್ಲೆಯಲ್ಲಿ ಇರುಳಿಗರ ಸಮಸ್ಯೆ ನೋಡಿದ್ದೇನೆ. ರಾಮನಗರದ ಕೂಟಗಲ್ ನಲ್ಲಿ ಇರುಳಿಗರ 26 ಕುಟುಂಬ ಇದೆ. ಅವರ ಸ್ಥಿತಿಯನ್ನ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಆದಿವಾಸಿಗಳಿಗೆ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಬೇಕು. ಕೂಟಗಲ್ ನಲ್ಲಿನ ಆದಿವಾಸಿಗಳಿಗೆ ಜಿಲ್ಲಾಡಳಿತ ಸೌಕರ್ಯ ನೀಡಬೇಕು. ನಾವು ಈ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಯನ್ನ ಭೇಟಿ ಮಾಡ್ತೇವೆ ಈ ಬಗ್ಗೆ ಅವರಲ್ಲಿ ಮನವಿ ಸಹ ಮಾಡ್ತೇವೆ ಎಂದು ಹೇಳಿದ್ದಾರೆ.
ಹೋರಾಟದ ಎಚ್ಚರಿಕೆ:
ಇರುಳಿಗರ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಮುಂದೆ ಭರವಸೆ ಈಡೇರದಿದ್ದರೆ ಹೋರಾಟ ನಡೆಸಬೇಕಾಗತ್ತೆ. ಒಟ್ಟಾರೆ 16 ಸಾವಿರ ಜನರು ಆದಿವಾಸಿಗಳಿದ್ದಾರೆ ಎಲ್ಲಾ ಕಡೆ ಅವರ ಪರವಾಗಿ ನಾನು ಹೋರಾಟ ಮಾಡ್ತೇನೆ ಎಂದು ತಿಳಿಸಿದ್ದಾರೆ.