ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸೈಯದ್ ಸಾದತ್ ಉಲ್ಲಾ ಸಕಾಫ್ ಎಂಬುವರು ತಮ್ಮ ಸ್ವಂತ ಹಣದಲ್ಲಿ ಬಸವೇಶ್ವರ ದೇವಾಲಯ ಕಟ್ಟಿಸುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಒಂದೇ ಕಾಂಪೌಂಡಿನ ಒಳಗೆ ಮಸೀದಿಯನ್ನು ಕೂಡ ನಿರ್ಮಾಣ ಮಾಡಿಸಿದ್ದಾರೆ. ಈ ಮೂಲಕ ಹಿಂದೂ-ಮುಸ್ಲಿಮರ ನಡುವೆ ಇರುವ ಭಾವೈಕ್ಯತೆಯನ್ನು ಸಾರಿದ್ದಾರೆ.

ವೀರಭದ್ರಸ್ವಾಮಿ ದೇವಾಲಯ ನಿರ್ಮಾಣ: ಇವರು ಮುಸ್ಲಿಂ ಮುಖಂಡರಾದ್ರು ಕೂಡ ಹಿಂದೂಗಳ ಮೇಲೆ ಅಪಾರ ಪ್ರೇಮವನ್ನು ಹೊಂದಿದ್ದಾರೆ. ತಮ್ಮ ಕ್ಷೇತ್ರದ ಜನರು ಸಾಮರಸ್ಯದಿಂದ ಇರಬೇಕು ಎಂಬ ಉದ್ದೇಶದಿಂದ 2010ರಲ್ಲೇ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿದ್ದರು. ಈ ದೇವಸ್ಥಾನದ ಉದ್ಘಾಟನೆಯನ್ನು ದಿವಂಗತ ಸಿದ್ದಗಂಗಾ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮಾಡಿದ್ದರು. ಇದೀಗ ಬಸವೇಶ್ವರ ದೇವಸ್ಥಾನ ಕಟ್ಟಿಸಿದ್ದು, ಇದರ ಉದ್ಘಾಟನೆಯನ್ನು ಬಹಳ ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದ್ದಾರೆ.

ಹೀಗಾಗಿ ಇಂದು ಬಸವೇಶ್ವರ ದೇಗುಲದ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಈ ಗ್ರಾಮದ ಮತ್ತೊಂದು ವಿಶೇಷತೆ ಏನಂದ್ರೆ, ಹಿಂದೂ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಮುಸ್ಲಿಂ ಬಾಂಧವರು ಬರ್ತಾರೆ. ಹಾಗೆಯೇ ಮುಸ್ಲಿಂ ಬಾಂಧವರು ನಡೆಸುವ ಗಂಧ ಮಹೋತ್ಸವಕ್ಕೆ ಹಿಂದೂಗಳು ಬರುತ್ತಾರೆ. ಹಾಗಾಗಿ ಈ ಗ್ರಾಮವನ್ನು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಗ್ರಾಮವೆಂದು ಸಹ ಕರೆಯಲಾಗುತ್ತದೆ.
ನೆರವಿನ ಹಸ್ತ: ಅಷ್ಟೇ ಅಲ್ಲದೇ ಸೈಯದ್ ಸಾದತ್ ಉಲ್ಲಾ ಸಕಾಫ್ ಅವರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದವರಿಗೆ ಹಣವನ್ನು ಸಹ ನೀಡಿದ್ದಾರೆ. ಹಿಂದೂ -ಮುಸ್ಲಿಮರು ಭಾವೈಕ್ಯತೆಯಿಂದ, ಅಣ್ಣ- ತಮ್ಮಂದಿರ ಹಾಗೆ ಕೊನೆಯ ವರೆಗೂ ಇರಬೇಕು ಎಂಬುದು ಇವರ ಆಶಯವಾಗಿದೆ. ಧರ್ಮಗಳ ನಡುವೆ ವೈಮನಸ್ಸು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸೈಯದ್ ಸಕಾಫ್ ರಂತಹ ವ್ಯಕ್ತಿಗಳು ಎಲ್ಲಾರಿಗೂ ಸ್ಫೂರ್ತಿದಾಯಕವಾಗಿದ್ದಾರೆ.
ಇದನ್ನೂ ಓದಿ: ದೇವಾಲಯ ಕಟ್ಟಿಸುವಂತೆ ಮನವಿ ಮಾಡಿದ ಮುಸ್ಲಿಂ ಯುವಕ