ರಾಯಚೂರು: ರಾಯಚೂರು-ಯಾದಗಿರಿ ಜಿಲ್ಲೆಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳಲ್ಲೂ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.
ಜಿಲ್ಲೆಯ ಲಿಂಗಸ್ಗೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ರಾಯಚೂರು-ಯಾದಗಿರಿ ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಿಜ, ನನ್ನ ಬಳಿ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.
ಶಾಸಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಬೇಡಿಕೆಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಕೆಲ ವ್ಯಕ್ತಿಗಳದ್ದೇ ಅಧಿಕಾರ ನಡೆಯುತ್ತದೆ ಅಂತಾ ಹೇಳಿದ್ದಾರೆ. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಶಾಸಕರ ರಾಜೀನಾಮೆ ಸಲ್ಲಿಕೆ ಅವರ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬಿಜೆಪಿ ಕೈವಾಡವಿಲ್ಲ.
ಅವರಿಗೆ ಅಲ್ಲಿ ಗೌರವವಿಲ್ಲವೆಂದು ಅಸಮಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅತೃಪ್ತರು ಹೇಳಿಕೆ ನೀಡಿದ್ದಾರೆ. ಅದು ಅವರ ಆಂತರಿಕ ವಿಚಾರವಾಗಿದೆ. ಈಗಂತೂ ಬಿಜೆಪಿ ಯಾವುದೇ ಕೈವಾಡವಿಲ್ಲ. ಮುಂದಿನ ಬೆಳವಣಿಗೆ ಬಗ್ಗೆ ನಾವು ಏನೂ ಹೇಳುವುದಕ್ಕೆ ಆಗಲ್ಲ ಎಂದರು.