ರಾಯಚೂರು: ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ವಾಸವಾಗಿದ್ದ ಧೂಳಯ್ಯ ಎಂಬ ವಿದ್ಯಾರ್ಥಿಯ ಕೊಲೆ ಪ್ರಕರಣ ಸಂಬಂಧ ಎರಡು ವರ್ಷವಾದ್ರೂ ತಪ್ಪಿತಸ್ಥರನ್ನು ಬಂದಿಸದೇ ನಿರ್ಲಕ್ಷ್ಯ ವಹಿಸಿದ್ದು, ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿ ನಾಗಪ್ಪ ಆರೋಪಿಸಿದರು.
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಂಬಲದಿನ್ನಿಯ ವಿದ್ಯಾರ್ಥಿ ಧೂಳಯ್ಯನ ಕೊಲೆ 4-8-2017ರಲ್ಲಿ ನಡೆದಿದೆ. ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತಿದ್ದ ಈತ ಪ್ರತಿಭಾನ್ವಿತ ಹಾಗೂ ಶಿಕ್ಷಣದಲ್ಲಿಯೂ ಮುಂದೆ ಇದ್ದ. ಈತನನ್ನು ಉಪ್ಪಾರ ಸಮಾಜದ ಪಾಗುಂಟಪ್ಪ, ದೊಡ್ಡ ನರಸಿಂಹಲು, ವಿರುಪಾಕ್ಷಿ, ಶ್ರೀನಿವಾಸ, ಕಿಷ್ಣಪ್ಪ ಎಂಬುವರು ಸೇರಿ ಮನೆಯಿಂದ ಕರೆದುಕೊಂಡು ಹೋಗಿ ಹಳ್ಳದಲ್ಲಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ದೂರಿದರು.
ಈ ಪ್ರಕರಣದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸದೆ, ತನಿಖೆಯ ಹಾದಿ ತಪ್ಪಿಸಿ ಕೊಲೆಗೈದವರನ್ನು ರಕ್ಷಿಸಲಾಗುತ್ತಿದೆ. ಕೊಲೆ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮಾತ್ರವಲ್ಲದೇ ಸಮಾಜದ ಜನಪ್ರತಿನಿಧಿಗಳು ಇತರರನ್ನು ಒತ್ತಾಯಿಸಿದರೆ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಹಣದ ಆಮಿಷ ತೋರಿಸಿದ್ದಾರೆ ಹೊರತು ನ್ಯಾಯ ದೊರೆಕಿಸಿಲ್ಲ ಎಂದು ಆರೋಪಿಸಿದರು.