ರಾಯಚೂರು : ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರವನ್ನ ಎರಡು ಪಕ್ಷಗಳ ಅಭ್ಯರ್ಥಿಗಳು ಜೋರಾಗಿ ನಡೆಸುತ್ತಿದ್ದಾರೆ. ಸಾಂಕೇತಿಕವಾಗಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಾಯಕರ ದಂಡು ಮಸ್ಕಿಗೆ ಬರುವ ಸಾಧ್ಯತೆಯಿದೆ.
ಓದಿ: ಮಸ್ಕಿ ಉಪಚುನಾವಣೆ.. ಕಣದಲ್ಲಿರುವ ಕೈ-ಕಮಲ ಅಭ್ಯರ್ಥಿಗಳಿಬ್ಬರೂ ಕೋಟ್ಯಾಧೀಶರು
ಮಸ್ಕಿ ವಿಧಾನಸಭಾ ಉಪಚುನಾವಣೆ ಕಣ ರಂಗೇರುತ್ತಿದೆ. ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರಾನೇರ ಪೈಪೋಟಿ ಇದೆ. ಗೆಲುವಿಗಾಗಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಬಿಜೆಪಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ನ ಆರ್ ಬಸವನಗೌಡ ತುರುವಿಹಾಳ ಅಖಾಡಕ್ಕಿಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ನಾಮಪತ್ರ ಸಲ್ಲಿಸುವ ವೇಳೆ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜೇಯೆಂದ್ರ, ಶಾಸಕರಾದ ಡಾ.ಶಿವರಾಜ್ ಪಾಟೀಲ್, ರಾಜುಗೌಡ, ಚುನಾವಣೆ ಉಸ್ತುವಾರಿಗಳು, ವಿಭಾಗೀಯ ಮುಖಂಡರು ಸೇರಿ ಪಕ್ಷದ ಪ್ರಮುಖರು ಭಾಗವಹಿಸುವ ಸಾಧ್ಯತೆಯಿದೆ.
ಇನ್ನು, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸ್ಥಳೀಯ ನಾಯಕರು, ಮುಖಂಡರು ಸೇರಿ ಅನೇಕರ ಸಮ್ಮುಖದಲ್ಲಿ ನಾಮಪತ್ರವನ್ನ ಸಲ್ಲಿಸಲಿದ್ದಾರೆ.
ಆದರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆ, ಡಿಕೆಶಿ ಭಾಗವಹಿಸುತ್ತಾರೋ ಇಲ್ಲವೋ ಅನ್ನೋದು ಸ್ಪಷ್ಟತೆ ಸಿಕ್ಕಿಲ್ಲ. ನಾಳೆ ಎರಡು ಪಕ್ಷದ ನಾಯಕರು ನಾಮಪತ್ರ ಸಲ್ಲಿಸುವ ಸಲುವಾಗಿ ಆಗಮಿಸಿರುವುದು ಚುನಾವಣೆ ಕಾವು ಮತ್ತಷ್ಟು ರಂಗು ಪಡೆಯಲಿದೆ.