ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದ ರಮೇಶ ಕೇಶಪ್ಪ ಎಂಬಾತನ ಎಸ್ಬಿಐ ಖಾತೆಯಲ್ಲಿದ್ದ 2,56,400 ರೂಪಾಯಿಗಳಿಗೆ ಅಪರಿಚಿತರು ಖನ್ನ ಹಾಕಿದ್ದಾರೆ.
ಘಟನೆ ಹಿನ್ನೆಲೆ : ರಮೇಶ ಲಿಂಗಸೂಗೂರು ಎಸ್ಬಿಐ ಉಳಿತಾಯ ಖಾತೆ ಹೊಂದಿದ್ದರು. ಎಟಿಎಂ, ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದಾರೆ. ನಾಗರಾಳ ಗ್ರಾಮದಲ್ಲಿ ಜೂನ್ 9ರಂದು ಮಧ್ಯಾಹ್ನ 1;25 ಗಂಟೆಯ ಸುಮಾರಿಗೆ, ಜ್ಯುವೆಲ್ಲರಿ ಶಾಪ್ನಲ್ಲಿರುವ ವೇಳೆ ಯೋನೊ ಎಸ್ಬಿಐ ಬ್ಯಾಂಕಿಂಗ್ಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಮಾಹಿತಿಗಾಗಿ ಶೋಧಿಸಿ, ಗ್ರಾಹಕ ಸೇವೆ 18002083702 ಕರೆ ವಿಚಾರಿಸಿಕೊಂಡಿದ್ದಾರೆ.
ಮೋಸಗೊಳಿಸಿದ್ದು ಹೇಗೆ?: ಇವರು ಮಾಹಿತಿಯನ್ನು ಹುಡುಕಿರುವ ವಿಷಯ ತಿಳಿದಿರುವ ಅಪರಿಚಿತರು ಮೊಬೈಲ್ ಸಂಖ್ಯೆ-917044513700ನಿಂದ ಕರೆ ಮಾಡಿ ಎಸ್ಬಿಐ ಬ್ಯಾಂಕಿನ ಸಿಬ್ಬಂದಿಯೆಂದು ನಂಬಿಸಿ, ಡೆಬಿಟ್ ಕಾರ್ಡ್ನ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ನಿಮ್ಮ ಡೆಬಿಟ್ ಕಾರ್ಡ್ಗೆ ಯೋನೊ ಬ್ಯಾಂಕಿಂಗ್ ಸೇವೆ ಸೇರಿಸುವುದಾಗಿ ಹೇಳಿ, ಗ್ರಾಹಕನನ್ನ ನಂಬಿಸಿ ಮೊಬೈಲ್ಗೆ ಬರುವ ಒಟಿಪಿ ತಿಳಿಸುವಂತೆ ಹೇಳಿದ್ದಾರೆ. ಇದಾದ ಬಳಿಕ ರಮೇಶ್ ಅಕೌಂಟ್ನಿಂದ 2,56,400 ರೂ. ಡ್ರಾ ಮಾಡಿರುವ ಎಸ್ಎಂಎಸ್ ಬಂದಿದೆ.
ಇದಾದ ಬಳಿಕ ತಕ್ಷಣ ಅನುಮಾನಗೊಂಡ ರಮೇಶ್ ಈ ಕುರಿತಂತೆ ಬ್ಯಾಂಕ್ ಮ್ಯಾನೇಜರ್ನ ವಿಚಾರಿಸಿದಾಗ ಅಪರಿಚಿತರು ನಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ ರಮೇಶ್ ಇದೀಗ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.