ರಾಯಚೂರು: ದೇಶದ ಆರ್ಥಿಕ ಕ್ಷೇತ್ರ ಸುಧಾರಣೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯ್ತು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ನಂತರ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೃಷಿ ಕಾರ್ಮಿಕರು, ಕುಶಲಕರ್ಮಿಗಳು, ನಗರ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಕೆಲಸ ಮಾಡುವ ಕ್ಷೇತ್ರಕ್ಕೆ ಶೇ.40ಕ್ಕಿಂತ ಕಡಿಮೆ ಸ್ವಯಂ ಚಾಲಿತ ಯಂತ್ರಗಳನ್ನು ಬಳಸುವ ಹಾಗೂ ಶೇ.60ಕ್ಕಿಂತಲೂ ಮಿಗಿಲಾದ ಮಾನವ ಶ್ರಮವನ್ನು ಬಳಕೆ ಮಾಡುವ ಕ್ಷೇತ್ರವಾಗಿದೆ. ಆದರೆ, ಇಂತಹ ಶ್ರಮಜೀವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ.
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುತ್ತಿದೆ. ಪ್ರಧಾನಿ ಮೋದಿಯವರು ಬಂಡವಾಳಶಾಹಿ ಪರ ಒಲವು ತೋರಿ ದುಡಿಯುವ ಕಾರ್ಮಿಕ ವರ್ಗವನ್ನು ಕಡೆಗಣಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ದೂರಿದರು. ನರೇಗಾ ಯೋಜನೆಯಡಿ ಪ್ರಸ್ತುತ ಕೇವಲ 100 ದಿನ ಮಾತ್ರ ಕೆಲಸ ನೀಡುತ್ತಿದೆ. ಇದನ್ನು 200 ದಿನನಕ್ಕೆ ವಿಸ್ತರಿಸಬೇಕು. ದೇಶದ ಜವಳಿ ಕ್ಷೇತ್ರಕ್ಕೆ ಶೂನ್ಯ ತೆರಿಗೆ ವಿಧಿಸಬೇಕು. ಫೈನಾನ್ಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.