ರಾಯಚೂರು: ದೇಶದ ಶಾಂತಿಗೆ ಧಕ್ಕೆ, ಪಕ್ಷ ಹಾಗೂ ಧರ್ಮದ ಬಗ್ಗೆ ದ್ವೇಷದ ಮನೋಭಾವನೆ ಉಂಟು ಮಾಡುವ ಸಂದೇಶವನ್ನು ವಾಟ್ಸ್ಆ್ಯಪ್ನಲ್ಲಿ ಹಾಕಿರುವ ಆರೋಪದ ಮೇಲೆ ಶಿಕ್ಷಕಿಯನ್ನ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಯಚೂರು ನಗರದ ಅದ್ರೂನ್ ಕಿಲ್ಲಾ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ಆಗಸ್ಟ್ 23ರಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ದೇಶದ ಶಾಂತಿಗೆ ಧಕ್ಕೆ, ಪಕ್ಷ ಹಾಗೂ ಧರ್ಮದ ಬಗ್ಗೆ ದ್ವೇಷ ಮನೋಭಾವನೆ ಉಂಟು ಮಾಡುವ ರೀತಿಯಲ್ಲಿ ಮೆಸ್ಸೇಜ್ ರವಾನಿಸಲಾಗಿತ್ತು. ಅಷ್ಟೇ ಅಲ್ಲದೆ, ಪ್ರಧಾನಿಮಂತ್ರಿ, ರಕ್ಷಣಾ ಇಲಾಖೆ ಮುಖ್ಯಸ್ಥರು, ಗೃಹ ಸಚಿವರ ವಿರುದ್ಧ ಮತ್ತು ದೇಶದ ಘನ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವದುರ್ಗದ ಅಮೀನ್ ಹಾಗೂ ಸಂತೋಷ್ ಎಂಬುವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನಿಯ) ನಿಯಮಗಳು, 1957 ರ 10(1)(ಡಿ) ಪ್ರದತ್ತವಾದ ಅಧಿಕಾರವನ್ನ ಬಳಸಿಕೊಂಡು ಶಿಕ್ಷಕಿಯ ಬೇಜಾವಾಬ್ದಾರಿತನ ಮತ್ತು ಕರ್ತವ್ಯ ಲೋಪದಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೋನಾಳ ಅಮಾನತುಗೊಳಿಸಿ, ಆದೇಶ ಹೊರಡಿಸಿದ್ದಾರೆ.